ಹಾವೇರಿ: ನಮ್ಮ ಮುಖ್ಯಮಂತ್ರಿಗಳೇ ನಮ್ಮನ್ನು ತಿರಸ್ಕಾರ ಮಾಡಿದ್ದಾರೆ. ಹಿಂದುಳಿದ ವರ್ಗಗಳಾದ ಎಸ್.ಸಿ. ಮತ್ತು ಎಸ್.ಟಿ ಅವರನ್ನು ಕರೆದುಕೊಂಡು ಹೋಗಬೇಕಾಗಿತ್ತು. ವಿಶ್ವಾಸದಿಂದ ಇದ್ದವರಿಗೆ ಮೋಸ ಮಾಡಿದ್ದಾರೆ ಎಂದು ಹಾವೇರಿ ಶಾಸಕ ನೆಹರೂ ಓಲೇಕಾರ್ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದ್ದಾರೆ.
ಬುಧವಾರ ತಡರಾತ್ರಿ ಬೆಂಗಳೂರಿನಿಂದ ಹಾವೇರಿಗೆ ವಾಪಸ್ ಆಗಿದ್ದಾರೆ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ. ಮೂರನೇ ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ನಮ್ಮ ಮುಖ್ಯಮಂತ್ರಿಗಳೇ ತಿರಸ್ಕಾರ ಮಾಡಿದ್ದಾರೆ. ರಾಜ್ಯದಲ್ಲಿ ಛಲವಾಧಿ ಸಮುದಾಯದ 45 ಲಕ್ಷ ಮತಗಳು ಇವೆ. ನಮ್ಮ ಸಮುದಾಯದ ಹಾಗೂ ಕಾರ್ಯಕರ್ತರು ಸಚಿವ ಸ್ಥಾನ ನೀಡದ್ದಕ್ಕೆ ಆಕ್ರೋಶಗೊಂಡಿದ್ದಾರೆ. ಜೊತೆಗೆ ಮುಖ್ಯಮಂತ್ರಿಯವರು ನಮ್ಮನ್ನ ಸಂಪರ್ಕ ಮಾಡಿಲ್ಲ. ನಾನು ಭೇಟಿ ಮಾಡಲು ಹೋಗಿಲ್ಲ, ಕಾದು ನೋಡುತ್ತೇನೆ ಎಂದಿದ್ದಾರೆ.
ನಾನು ಯಾರನ್ನು ಸಂಪರ್ಕ ಮಾಡಿಲ್ಲ. ನಾಳೆ ನೂತನ ಸಚಿವ ಬಿ.ಸಿ.ಪಾಟೀಲ್ ನೆರೆ ಹಾಗೂ ಪ್ರವಾಹ ಪರಸ್ಥಿತಿ ಸಭೆ ಕರೆದಿದ್ದಾರೆ ಹೋಗುತ್ತೇನೆ. ಸದ್ಯ ಇರುವ ಆಯೋಗದ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ಯಾವುದೇ ನಿಗಮ ಮಂಡಳಿ ಬೇಡ. ನನಗೆ ಯಾವುದೇ ನಿಗಮ ಮಂಡಳಿಯ ಅವಶ್ಯಕತೆ ಇಲ್ಲ. ಎರಡನೇ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸ್ಥಾನ ನೀಡಲೇಬೇಕು ಎಂದು ಒತ್ತಾಯ ಮಾಡುತ್ತೇನೆ. ಇಲ್ಲಾದರೆ 45 ಲಕ್ಷ ಛಲವಾಧಿ ಸಮುದಾಯದ ಇದೆ. ಅದು ಬೇರೆ ಪಕ್ಷದ ಕಡೆಗೆ ಹೋಗಲಿದ್ದಾರೆ. ಮುಖ್ಯಮಂತ್ರಿಗಳು ವಿವೇಚನೆ ಮಾಡಿ ಸ್ಥಾನ ನೀಡಬೇಕು ಎಂದು ಶಾಸಕ ನೆಹರು ಓಲೇಕಾರ ಎಚ್ಚರಿಕೆ ನೀಡಿದ್ದಾರೆ.
ಮೋಸ, ವಂಚನೆ ಮತ್ತು ವಸೂಲಿಯಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿದೆ. ನಮ್ಮ ಜಿಲ್ಲೆಯವರಾದ ಮುಖ್ಯಮಂತ್ರಿಗಳಿಂದಲೇ ನನಗೆ ಮೋಸವಾಯ್ತು ಎಂದು ಶಾಸಕ ನೆಹರು ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧವೇ ಆಕ್ರೋಶ ಹೊರಹಾಕಿದ್ದರು.
ಪಕ್ಷದಲ್ಲಿ ಜಾತಿ ರಾಜಕಾರಣ ಮಾಡಲಾಗುತ್ತಿದ್ದು, ಪ.ಪಂಗಡದವರನ್ನ ಕಡೆಗಣನೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮುಂದುವರಿದ ಕೋಮಿನವರೆಗೆ ಅವಕಾಶಗಳು ಸಿಗುತ್ತಿವೆ. ಎಲ್ಲ ಲಿಂಗಾಯತರಿಗೆ ನೀಡಿದ್ರೆ, ಪ.ಜಾತಿ ಮತ್ತು ಪ.ಪಂಗಡದವರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದರು. ಸಿಎಂ ಮತ್ತು ಬಿ.ಸಿ.ಪಾಟೀಲ್ ಮುಂದುವರಿದ ಕೋಮಿನವರು. ಅವರಿಗೆ ಸ್ಥಾನ ಕೊಟ್ರೆ, ಅವರೇನು ಹಿಂದುಳಿದ ವರ್ಗಕ್ಕೆ ಸಂಬಂಧಿಸಿದವರಾ ಎಂದು ನೆಹರು ಓಲೇಕಾರ್ ಕಿಡಿಕಾರಿದ್ದರು. ಇದನ್ನೂ ಓದಿ:ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್