ಬಾಗಲಕೋಟೆ: ಜಾತಿ ರಹಿತವಾದ ಸಮಾಜ ನಿರ್ಮಾಣ ಮಾಡಬೇಕು ಅನ್ನೋದು ನಮ್ಮ ಆಶಯ. ಬರೀ ನಮ್ಮ ಧರ್ಮ ನಮ್ಮ ಧರ್ಮ ಎನ್ನುತ್ತಾರೆ. ನಮ್ಮ ಧರ್ಮ ಇಟ್ಕೊಳ್ರಪ್ಪ. ಪರಧರ್ಮದ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಿ ಎಂದು ಬಾದಾಮಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಬಾದಾಮಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಕ್ಕಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ನೀವೆಲ್ಲ ಪದವಿ ಶಿಕ್ಷಣ ಪಡೆಯುತ್ತಿದ್ದೀರಿ ಮೊದಲು ಮನುಷ್ಯತ್ವ ಬೆಳೆಸಿಕೊಳ್ಳಿ. ಕೆರೂರನಲ್ಲಿ ಇಲ್ಲಿಯವರೆಗೆ ಪ್ರಥಮ ದರ್ಜೆ ಕಾಲೇಜ್ ಗೆ ಹೊಸ ಕಟ್ಟಡ ಇರಲಿಲ್ಲ. ಜಾಗ ಇಲ್ಲದ ಕಾರಣ ಕಟ್ಟಡ ಇರಲಿಲ್ಲ. ಕೆಐಎಡಿಬಿ ಇಂದ 29 ಎಕರೆ ಜಾಗ ಕೊಡಿಸಿದ್ದೀನಿ. ಅದು ಕೋರ್ಟ್ಗೆ ಹೋಗಿತ್ತು, ನಾನು ಹೈ ಕೋರ್ಟ್ ಗೆ ಹೋಗಿ ನಂತರ ಆ ಜಾಗ ಕೆಐಎಡಿಬಿಗೆ ಬಂತು. ನಾನು ಕೆಐಎಡಿಬಿಯಿಂದ ಕಾಲೇಜ್ ಗೆ 29 ಎಕರೆ ಜಾಗ ಕೊಡಿಸಿದ್ದೀನಿ, ದುಡ್ಡು ಕೊಡಿಸಿದ್ದೀನಿ. ನಾಳೆಯಿಂದಲೇ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಕಟ್ಟಡ ಕಾಮಗಾರಿ ಆರಂಭವಾಗುತ್ತೆ ಎಂದರು.
ಅಧಿಕಾರಿಗಳು ಬಹಳ ಸೋಮಾರಿಗಳಿದ್ದಾರೆ. ಇನ್ನೂ ಕೂಡ ಕಾಮಗಾರಿ ಶುರುನೇ ಮಾಡಿಲ್ಲ. ನಾನು ನಿನ್ನೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ನಾಳೆಯಿಂದ ಶುರುಮಾಡ್ತೀವಿ ಅಂತಾ ಹೇಳಿದ್ದಾರೆ. ಕೆಲ ಸಾರ್ವಜನಿಕರು ಪೀಠೋಪಕರಣ ಕೊಡಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಸಿಗಬೇಕು. ಜ್ಞಾನ ಬೆಳವಣಿಗೆಯಾಗಬೇಕು. ಪ್ರತಿಯೊಬ್ಬರಿಗೂ ಸಮಾಜದ ಋಣ ಇರುತ್ತೆ. ಸಮಾಜದ ಋಣ ತೀರಿಸಬೇಕು. ಓದಿದವರು ಜಾತಿ ಮಾಡಲು ಹೋಗಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದನ್ನೂ ಓದಿ: ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ
ಓದಿಕೊಂಡು ಹೋಗಿ, ಹಳ್ಳಿಗಳಲ್ಲಿ ಜಾತಿ ನೋಡುತ್ತಾರೆ. ಬಸವಣ್ಣನವರ ವಚನದಲ್ಲಿರುವಂತೆ, ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ನಮ್ಮ ಜಾತಿಯವನು ಅಂತಾ ಅಲ್ಲ, ಎಲ್ಲ ಜಾತಿಯವರು ನಮ್ಮವರೇ ಎಂದು ತಿಳಿಯಬೇಕು. ಕೊಳಕು ಬಟ್ಟೆ, ಚಡ್ಡಿ ಹರಿದೋಗಿದೆ ಅಂದ್ರೆ ಅದು ಅವನ ಹಣೆಬರಹ. ಯಾವ ದೇವರು ಇದನ್ನು ಹೇಳಿದ್ಯಾ, ಹಾಗಿದ್ರೆ ಅದು ದೇವರೇ ಅಲ್ಲ. ಎಲ್ಲರಿಗೂ ರಕ್ಷಣೆ ಕೊಡೋಣು ದೇವರು. ಈ ಕಂದಾಚಾರಗಳು ಹೋಗಬೇಕು. ಉಳ್ಳವರು ಶಿವಾಲಯ ಮಾಡವರು, ನಾನೇನು ಮಾಡಲಿ ಬಡವನಯ್ಯ ಎಂದು ಹೇಳಿದ್ದಾರೆ. ದೇವರೆಲ್ಲೂ ಇಲ್ಲ, ದೇವರು ನಮ್ಮಲ್ಲೇ ಇದ್ದಾನೆ ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳಿದರು.
ಟ್ಯಾಬ್ ಸರಿಯಾಗಿ ಉಪಯೋಗಿಸಿಕೊಂಡು ಶಿಕ್ಷಣ ಪಡೆಯಿರಿ. ಬುದ್ದಿವಂತಿಕೆ ಯಾರಪ್ಪನ ಸ್ವತ್ತಲ್ಲ. ನಮ್ಮೂರಲ್ಲಿ ಶಾನಭೋಗ ಅಂತಾ ಇದ್ದ. ವಕೀಲ ವೃತ್ತಿ ಶೂದ್ರರಿಗೆ ಹತ್ತಲ್ಲ, ಮೇಲ್ಜಾತಿಯವರಿಗೆ ಹತ್ತುತ್ತೆ ಎಂದು ನಮ್ಮಪ್ಪನಿಗೆ ಹೇಳಿದ್ದ. ಪ್ರತಿಯೊಬ್ಬರು ಬುದ್ದಿವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಮೇಲ್ಜಾತಿಯಲ್ಲಿ ಹುಟ್ಟಿದ್ರಾ? ರಾಮಾಯಣ ಬರೆದವರು ಮೇಲ್ಜಾತಿಯಲ್ಲಿ ಹುಟ್ಟಿದ್ರಾ? ವಾಲ್ಮೀಕಿ ಯಾವ ಜಾತಿಯಲ್ಲಿ ಹುಟ್ಟಿದ್ರು? ಬುದ್ದಿವಂತಿಕೆ ಜಾತಿಯಿಂದ ಬರಲ್ಲ. ನಮ್ಮ ತಂದೆ ತಾಯಿ, ನಿನಗ್ಯಾಕಪ್ಪ ಕುರಿ ಮೇಯಿಸು, ದನ ಮೇಯಿಸು ಎಂದು ಹೇಳುತ್ತಾರೆ ಆದರೆ ಪ್ರತಿಯೊಬ್ಬರು ವೈಚಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.