– ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಬೆಂಗಳೂರು: ದಿನೇ ದಿನೇ ಬದಲಾಗುತ್ತಿರುವ ಕಾಲಘಟ್ಟದಲ್ಲಿ, ನಮ್ಮ ಭೂಮಿ ಕಸದ ತೊಟ್ಟಿಯಾಗುತ್ತಿದೆ. ಪರಿಸರ ಮಾಲಿನ್ಯ ಎಲ್ಲೆ ಮೀರಿದೆ ಇದರ ಪರಿಣಾಮ, ಕೊರೊನಾದಂತಹ ಹೊಸ ಬಗೆಯ ರೋಗಾಣುಗಳ ಸೃಷ್ಟಿಯಾಗಿದೆ. ಹಾಗಾಗಿ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಸಂಪೂರ್ಣ ಕಲುಷಿತಗೊಂಡಿರುವ ನೆಲಮಂಗಲ ಮತ್ತು ಬಿನ್ನಮಂಗಲ ಕೆರೆಗಳನ್ನು ಉಳಿಸಿ ಎಂಬ ಅಭಿಯಾನವನ್ನು ಸಾರ್ವಜನಿಕರು ಹಮ್ಮಿಕೊಂಡಿದ್ದಾರೆ.
ಕೊರೊನಾದಿಂದ ಆದಂತಹ ಅವಾಂತರಗಳು, ದುರಂತಗಳು ನಮ್ಮ ಕಣ್ಣ ಮುಂದಿದೆ. ಮುಂದಿನ ದಿನಗಳಲ್ಲಿ ಇಂತಹ ಕಾಯಿಲೆಗಳಿಂದ ನಮ್ಮನ್ನು ಮತ್ತು ಮುಂದಿನ ತಲೆಮಾರನ್ನು ರಕ್ಷಿಸಲು ನಮಗಿರುವ ಮಾರ್ಗ, ನಗರದ ಹೆಮ್ಮೆಯಾಗಿದ್ದ ಐತಿಹಾಸಿಕ ಹಿನ್ನೆಲೆಯಿರುವ ಈ ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಿ ಅಭಿಯಾನವೊಂದನ್ನು ಆರಂಭಿಸೋಣ ಎಂದು ಕೆರೆ ಅಭಿವೃದ್ಧಿ ಉತ್ಸಾಹಿಗಳ ತಂಡ ನೆಲಮಂಗಲ ತಾಲೂಕಿನಲ್ಲಿ ರಚನೆಯಾಗಿದೆ. ಇದನ್ನೂ ಓದಿ: ನೀರಾವರಿ ಇಲಾಖೆಗೆ 12 ಸಾವಿರ ಕೋಟಿ ನೀಡಿರುವುದು ದುಡ್ಡು ಲೂಟಿ ಮಾಡೋಕೆ: ಹೆಚ್ಡಿಕೆ
ನಾಳೆ ತಾಲೂಕಿನ ಪೂಜ್ಯ ಸ್ವಾಮೀಜಿಗಳು, ಸರ್ವ ಪಕ್ಷಗಳ ಜನ ಪ್ರತಿನಿಧಿಗಳು ಮತ್ತು ಮುಖಂಡರು, ಸಾಹಿತಿಗಳು, ಕಲಾವಿದರು, ಹಿರಿಯರು, ಚಿಂತಕರು, ಕೊರೊನಾ ಮುಕ್ತ ನೆಲಮಂಗಲ ತಂಡದವರು, ಪರಿಸರ ಪ್ರೇಮಿಗಳು, ರೈತಪರ ಹೋರಾಟಗಾರರು, ವರ್ತಕರು, ಸಾರ್ವಜನಿಕ ಹಿತಾಸಕ್ತಿಯ ಕಟ್ಟಾಳುಗಳು, ಮಹಿಳೆಯರು, ಪ್ರಜ್ಞಾವಂತ ನಾಗರಿಕರು ಹಾಗೂ ಯುವಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬಿನ್ನಮಂಗಲ ಕೆರೆಯಿಂದ ಪ್ರವಾಸಿ ಮಂದಿರದವರೆಗೆ ಬೈಕ್ ರ್ಯಾಲಿ ನಡೆಯಲಿದ್ದು, ನಂತರ ಪ್ರವಾಸಿ ಮಂದಿರದಿಂದ ನೆಲಮಂಗಲ ಕೆರೆಯವರೆಗೆ ಪಾದಯಾತ್ರೆ ನಡೆಯಲಿದೆ. ನೂರಾರು ಜನರು ಸೇರುವ ನಿರೀಕ್ಷೆ ಇದ್ದು, ಈ ಅಭಿಯಾನಕ್ಕೆ ವ್ಯಾಪಕವಾಗಿ ಬೆಂಬಲ ಸಿಕ್ಕಿದೆ.