ಮೈಸೂರು: ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಬೀಳುತ್ತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ, ಆಂತರಿಕ ಕಚ್ಚಾಟ ಏನು ಅಂತ ಅವರಿಗೆ ಗೊತ್ತಿದೆ. ಅದರಿಂದ ಯಾವ ಸರ್ಕಾರಕ್ಕೆ ತೊಂದರೆಯಾಗಿದೆ ಎಂಬುದು ಗೊತ್ತಿದೆ. ಲಕ್ಷ್ಮಣ ರೇಖೆ ದಾಟುವವರು ಬೇರೆ ಪಕ್ಷದಲ್ಲಿ ಇರಬಹುದು. ಆದರೆ ಬಿಜೆಪಿಯಲ್ಲಿ ಅಂತಹವರು ಯಾರೂ ಇಲ್ಲ. ಪಕ್ಷದಲ್ಲಿ ಯಾವುದೇ ಕಿತ್ತಾಟ ಇಲ್ಲ. ಸರ್ಕಾರ ಸುಭದ್ರವಾಗಿದೆ. ಮೂರುವರೆ ವರ್ಷ ಸ್ಥಿರವಾಗಿರುತ್ತದೆ ಎಂದರು. ಇದನ್ನೂ ಓದಿ: ದಿಢೀರ್ ತೇಲಿಬಂತು ನಿರಾಣಿ ಮನೆಯಲ್ಲಿನ ಕತ್ತಿ, ರಾಮದಾಸ್ ಸಭೆಯ ಫೋಟೋ
ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ, ಸಭೆ ಮಾಡಿದ್ದು ತಪ್ಪು. ಕೆಲವರಿಗೆ ಸಣ್ಣ ಪುಟ್ಟ ಅಪೇಕ್ಷೆ ಇರುತ್ತದೆ. ಹಾಗೆಂದ ಮಾತ್ರಕ್ಕೆ ಅಪೇಕ್ಷೆ ಇರುವುದು ತಪ್ಪಲ್ಲ. ಆದರೆ ಅದನ್ನ ಕೇಳುವುದು ಸರಿಯಾಗಿರಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಹೇಳಿದ್ದೇನು?:
ಸಿಎಂ ಯಡಿಯೂರಪ್ಪ ನಮ್ಮ ಲೀಡರ್ ಅಲ್ಲ. ಮುಖ್ಯಮಂತ್ರಿ ಮಾತ್ರ ಅಂತ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರು ನಾಯಕರಲ್ಲ ಅಂತ ಒಪ್ಪಿಕೊಂಡಿಲ್ಲ. ಅವರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಿಜೆಪಿಯವರ ಆಂತರಿಕ ಕಚ್ಚಾಟದಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದ್ದರು.
ಮಾಜಿ ಸಚಿವ ಉಮೇಶ್ ಕತ್ತಿ ನನ್ನ ಸ್ನೇಹಿತ. ಜೆ.ಎಚ್.ಪಟೇಲ್ ಸರ್ಕಾರದಲ್ಲಿ ನಾನು ಡಿಸಿಎಂ, ಅವರು ಲೋಕೋಪಯೋಗಿ ಸಚಿವರಾಗಿದ್ದರು. ಹಾಗಾಗಿ ನಮ್ಮಿಬ್ಬರ ಸ್ನೇಹ ಚೆನ್ನಾಗಿದೆ. ಉಮೇಶ್ ಕತ್ತಿ ನನ್ನ ಭೇಟಿಯಾಗಿಲ್ಲ. ಇಂತಹ ಭ್ರಷ್ಟ ಸರ್ಕಾರ ಹೋಗಬೇಕು. ಅವತ್ತು ಪ್ರಧಾನಿ ಮೋದಿ ಶೇ.10 ಸರ್ಕಾರ ಅಂತ ನಮ್ಮ ಮೇಲೆ ಆರೋಪ ಮಾಡಿದ್ದರು. ಇವತ್ತು ಎಷ್ಟು ಪರ್ಸೆಂಟ್ ಸರ್ಕಾರ ಎನ್ನುವುದನ್ನ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಈ ಕೆಟ್ಟ ಸರ್ಕಾರ ಇರಬಾರದು, ಹೋಗಬೇಕು ಎಂದು ಗುಡುಗಿದ್ದರು.
ಬಿಜೆಪಿ ಅಸಮಾಧಾನ ಶುರುವಾಗಿದೆ. ಹೀಗಾಗಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಅಂತ ಹೇಳಿದ್ದಾರೆ. ಅವರ ಜೊತೆಗೆ ಮಹೇಶ್ ಕುಮಟಳ್ಳಿ ಬಿಟ್ರೆ ಬೇರೆ ಯಾರು ಹೋಗಲಿಲ್ಲ. ಆದ್ರೆ ಕುಮಟಳ್ಳಿ ಅವರನ್ನು ಮಂತ್ರಿ ಮಾಡಲಿಲ್ಲ. ಈ ಸರ್ಕಾರ ಬಿಜೆಪಿ ಅವರಿಂದಲೇ ಬೀಳುವ ಸಾಧ್ಯತೆ ಇದೆ. ಸರ್ಕಾರ ಬಿದ್ರೆ ನಮ್ಮ ಕೈವಾಡ ಇರಲ್ಲ. ಇಷ್ಟೊಂದು ಕೆಟ್ಟ ಭ್ರಷ್ಟ ಸರ್ಕಾರ ನಾನು ನೋಡಿರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸರ್ಕಾರ ಹೋಗುವುದು ಉತ್ತಮ ಎಂದು ವಾಗ್ದಾಳಿ ನಡೆಸಿದ್ದರು.