– ಅವಧಿ ಮುಗಿದರೂ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರ ಅಳಲು
ಯಾದಗಿರಿ: ನಮ್ಮನ್ನ ಬಿಟ್ಟು ಬಿಡಿ, ನಾವು ನಮ್ಮೂರಿಗೆ ಹೋಗುತ್ತೇವೆ ಎಂದು ಅವಧಿ ಮುಗಿದರೂ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು ಯಾದಗಿರಿ ತಾಲೂಕಿನ ಲಿಂಗೇರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೇಸಿಗೆ ಬಿಸಿಲಲ್ಲಿ ಫ್ಯಾನ್, ಕರೆಂಟ್ ಇಲ್ಲದೇ ಹೇಗೆ ಇರಬೇಕು. ಇದರ ಜೊತೆಗೆ ಕಳಪೆ ಆಹಾರ ನೀಡುತ್ತಿದ್ದಿರಿ, ಇದರಿಂದ ಅನಾರೋಗ್ಯ ಪೀಡಿತರಾಗಿದ್ದೇವೆ. ನಾವು ಇಲ್ಲಿ ಇರಲ್ಲ, ನಮ್ಮನ್ನು ಬಿಟ್ಟು ಬಿಡಿ ಎಂದು ಕಾರ್ಮಿಕರು ಪ್ರತಿಭಟನೆ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಯಾದಗಿರಿ ತಾಲೂಕಿನ ಲಿಂಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಅವರ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಕೇಂದ್ರದಲ್ಲೇ ಇರಿಸಲಾಗಿದೆ. ಇದರಿಂದಾಗಿ ಕಾರ್ಮಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 21 ದಿನಗಳಿಂದ ನಮ್ಮನ್ನ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ನಮ್ಮನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದ್ದು, ರಿಪೋರ್ಟ್ ಕೂಡ ಬಂದಿದೆ. ಆದರೂ ಇಲ್ಲಿಯೇ ಇರಿಸಿದ್ದಾರೆ. ನಾವು ಮಾತ್ರ ಇಂದು ಮನೆಗೆ ಹೋಗುತ್ತೇನೆ. ನಮ್ಮ ವಿರುದ್ಧ ಯಾವುದೇ ಕ್ರಮ ಬೇಕಾದರೂ ಕೈಗೊಳ್ಳಿ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರೊಬ್ಬರು ಕಿಡಿಕಾರಿದ್ದಾರೆ.