ಕಲಬುರಗಿ: ಸರ್ ನಮಗೆ ಇಂಗ್ಲೀಷ್ ಬರಲ್ಲ ಈ ಅಧಿಕಾರಿಗಳಿಗೇ ನೀವೆ ಸ್ಚಲ್ಪ ಕ್ಲಾಸ್ ತೆಗೆದುಕೊಳ್ಳಿ ಎಂದು ಕಲಬುರಗಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ವೈದ್ಯಕೀಯ ಸಚಿವ ಡಾ.ಸುಧಾಕರಗೆ ವಿಧಾನ ಪರಿಷತ್ ಸದಸ್ಯ ತಿಪಣಪ್ಪ ಕಮಕನೂರ ನಗೆ ಚಟಾಕಿ ಹಾರಿಸಿದ್ದಾರೆ.
ಕೊರೊನಾ ಬಗ್ಗೆ ಜಿಲ್ಲೆಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ, ಬರೀ ಇಂಗ್ಲಿಷ್ನಲ್ಲಿ ಏನೆನೋ ಹೇಳಿ ಬಿಡ್ತಾರೆ, ಒಂದೆಡೆ ಈ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ಕೆಲಸ ಮಾಡಿ ಎಂದು ಸೂಚಿಸಿದರೆ ಬರೀ ಇಂಗ್ಲಿಷ್ ನಲ್ಲಿ ಮಾತನಾಡಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ಹೀಗಾಗಿ ನಮಗೆ ಏನೂ ತಿಳಿಯುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಚಿವರ ಬಳಿ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಇದೀಗ ನೀವು ಸಭೆ ಕರೆಯುತ್ತಿರುವುದರಿಂದ ಈಗಷ್ಟೇ ನಮ್ಮ ಜಿಲ್ಲೆಯ ಕೊರೊನಾ ಬಗ್ಗೆ ಮಾಹಿತಿ ಸಿಗುತ್ತಿದೆ. ಸದ್ಯ ನೀವು ವೈದ್ಯಕೀಯ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದು, ಅಧಿಕಾರಿಗಳಿಗೆ ಸ್ವಲ್ಪ ಬಿಸಿ ಮುಟ್ಟಿಸಿ ಎಂದು ಹೇಳಿದ್ದಾರೆ. ಇನ್ನು ತಿಪ್ಪಣಪ್ಪ ಅವರ ಮಾತು ಕೇಳುತ್ತಿದ್ದಂತೆ ಅಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ನಕ್ಕಿದ್ದಾರೆ. ಹೀಗೆ ವಿಧಾನ ಪರಿಷತ್ ಸದಸ್ಯರು ತಮ್ಮ ಜಿಲ್ಲೆಯ ಅಧಿಕಾರಿಗಳ ಬಗ್ಗೆ ಹಾಸ್ಯವಾಗಿಯೇ ಸಚಿವರ ಬಳಿ ಹೇಳಿಕೊಂಡಿದ್ದಾರೆ.