ಬೆಂಗಳೂರು: ನನ್ನ 53 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗವಿಗಂಗಾಧರನಿಗೆ ಸೂರ್ಯ ರಶ್ಮಿ ಅಭಿಷೇಕ ಗೋಚರವಾಗಿಲ್ಲ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.
ಈ ಬಾರಿ ಗವಿಗಂಗಾಧರನಿಗೆ ಸೂರ್ಯ ರಶ್ಮಿಯ ಅಭಿಷೇಕ ಇಲ್ಲವಾಯಿತು. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಚಕರು, ಸ್ವಾಮಿ 2020 ಬಹಳಷ್ಟು ನೋವನ್ನು ಇಡೀ ಪ್ರಪಂಚಕ್ಕೆ ನೀಡಿದ್ದ. ಕಾರ್ತಿಕ ಸೋಮವಾರಗಳಲ್ಲಿ ಈ ಕೊರೊನಾ ಪೀಡೆಯನ್ನು ಕಡಿಮೆ ಮಾಡಿದ್ದ. ಕಳೆದ ಬಾರಿ ನಾನು ಹೇಳಿದ್ದೆ 2 ನಿಮಿಷಗಳ ಹೆಚ್ಚು ಕಾಲ ಸ್ವಾಮಿ ಮೇಲೆ ರಶ್ಮಿ ಇದಿದ್ದರಿಂದ ಕೊರೊನಾ ನಮ್ಮನ್ನೆಲ್ಲ ಕಾಡಿತ್ತು ಎಂದು ಹೇಳಿದರು.
ಸಹಸ್ರ ಕಣ್ಣುಗಳು ಮಧ್ಯಾಹ್ನ ಎರಡು ಗಂಟೆಗಳಿಂದ ಸೂರ್ಯ ರಶ್ಮಿ ಅಭಿಷೇಕ ನೋಡಲು ಕಾತರದಿಂದ ಕೂತಿತ್ತು. ಆದ್ರೆ ನನ್ನ 53 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಅಭಿಷೇಕ ಗೋಚರವಾಗಿಲ್ಲ. ಅದೇ ರೀತಿಯಲ್ಲಿ ನಮಗೆ ಯಾವ ತೊಂದರೆಯಾಗದಂತೆ ಅಗೋಚರವಾಗಿ ಆರ್ಶೀವಾದ ಮಾಡಲಿ ಎಂದು ಆಶೀಸುತ್ತೇನೆ ಎಂದರು.
ಈ ಬಾರಿ ಅಗೋಚರವಾಗಿ ಸೂರ್ಯ ಈಶ್ವರನ ದರ್ಶನ ಮಾಡಿ ಹೋಗಿದ್ದಾನೆ. ಅಗೋಚರವಾಗಿ ಸೂರ್ಯ ಸ್ಪರ್ಶ ಮಾಡಿದ್ದಾನೆ. ಪ್ರಕೃತಿಯಲ್ಲಿ ಸಣ್ಣ ಅಡಚಣೆಯಿಂದ ಅಗೋಚರವಾಗಿ ಈಶ್ವರನ ಪೂಜೆ ಮಾಡಿ ಮುಂದೆ ಸಾಗಿದ್ದಾನೆ. ಸ್ವಾಮಿಯ ಗರ್ಭಗುಡಿಯವರೆಗೂ ಸೂರ್ಯನ ಪ್ರವೇಶವಾಗಿದೆ. ಲಿಂಗದ ಕೆಳಭಾಗದಲ್ಲಿ ಇದ್ದಂತಹ ಆತ್ಮಲಿಂಗಕ್ಕು ಸಹ ಸೂರ್ಯನ ಸ್ಪರ್ಶವಾಗಿದೆ. ರುದ್ರಹೋಮಗಳಿಂದ ನಮ್ಮ ದೇಶ ಸುಭದ್ರದಲ್ಲಿರಲಿದೆ. ಇದು ಯುದ್ಧದ ಸೂಚಕ ಎಂದು ಸೋಮಸುಂದರ್ ದೀಕ್ಷಿತ್ ಸ್ವಾಮೀಜಿ ವಿವರಿಸಿದ್ದಾರೆ.
ಸಂಕ್ರಾಂತಿ ಸಡಗರದ ನಡುವೆ ಸೂರ್ಯ ತನ್ನ ಪಥ ಬದಲಾವಣೆಗಾಗಿ ಪ್ರತಿ ವರ್ಷ ಭಾಸ್ಕರನ ಅನುಮತಿಯನ್ನ ಇಂದು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಆದರೆ ಇಂದು ಮೋಡ ಅಡ್ಡವಾದ ಪರಿಣಾಮ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಗೋಚರವಾಗಿಯೇ ಗವಿ ಗಂಗಾಧರನನ್ನು ಸ್ಪರ್ಶಿಸಿ ಸೂರ್ಯ ಮುಂದೆ ಹೋಗಿದ್ದಾನೆ.