– ವಿಜಯೇಂದ್ರ ಅವರಿಗೆ ಭಾಗ್ಯ ರೇಖೆ ಇದೆ
ಶಿವಮೊಗ್ಗ: ಪಕ್ಷ ಹಾಗೂ ನಾಯಕತ್ವದ ವಿರುದ್ಧ ಹೇಳಿಕೆ ನೀಡುವ ಯತ್ನಾಳ್ ಮಾತನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈಗಾಗಿಯೇ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ ಎಂದು ಎಂಎಲ್ಸಿ ಆಯನೂರು ಮಂಜುನಾಥ್ ತಿಳಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಆಯನೂರು ಮಂಜುನಾಥ್ ಅವರು, ಸಾಮಾನ್ಯವಾಗಿ ಕಾಯಿಲೆ ಬಂದ ವ್ಯಕ್ತಿಗೆ ಆಪರೇಷನ್ ಮಾಡುವ ಮೊದಲು ಔಷಧಿ ಕೊಟ್ಟು ನೋಡುತ್ತಾರೆ. ಅದಕ್ಕೆ ರೋಗ ವಾಸಿಯಾಗಲಿಲ್ಲ ಅಂದರೆ ಆಪರೇಷನ್ ಮಾಡುವುದು ಅನಿವಾರ್ಯ ಆಗುತ್ತೆ. ಆಪರೇಷನ್ ಮಾಡಲಿಲ್ಲ ಅಂದರೆ ಆ ಕಾಯಿಲೆ ಮುಂದುವರಿಯುತ್ತೆ. ಆಗಾಗಿ ಪಕ್ಷ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಯತ್ನಾಳ್ ತನ್ನನ್ನು ತಾನೇ ಸಮರ್ಥ ನಾಯಕ ಎಂದುಕೊಂಡಿದ್ದಾನೆ. ಆ ರೀತಿಯ ಭ್ರಮೆ ಆತನಲ್ಲಿದೆ. ರಾಜಕಾರಣಿಗಳಿಗೆ ಇತರರು ಯಾರು ತಮ್ಮನ್ನು ಹೊಗಳದಿದ್ದಾಗ ತಮ್ಮನ್ನು ತಾವೇ ಹೊಗಳಿಕೊಳ್ಳುವ ಕಾಯಿಲೆ ಇರುತ್ತೆ. ಆ ರೀತಿಯ ಕಾಯಿಲೆ ಯತ್ನಾಳ್ಗೆ ಇದೆ. ಅಂತಹ ಒಂದು ಮಾನಸಿಕ ಕಾಯಿಲೆಗೆ ಯತ್ನಾಳ್ ನನ್ನ ಸ್ನೇಹಿತ ಒಳಗಾಗಿದ್ದಾನೆ ಎಂದು ಏಕ ವಚನದಲ್ಲಿಯೇ ಟೀಕಿಸಿದರು.
ಭಾಗ್ಯ ರೇಖೆ: ಕೆಲವರಿಗೆ ಭಾಗ್ಯ ರೇಖೆ ಇರುತ್ತದೆ. ಈಗಾಗಿಯೇ ಅವರು ಹೋದಲೆಲ್ಲಾ ಗೆಲುವು ಸಿಗುತ್ತೆ. ಅಂತಹ ಒಂದು ಭಾಗ್ಯ ರೇಖೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗಿದೆ. ಈಗಾಗಿಯೇ ಎರಡು ಉಪ ಚುನಾವಣೆಯಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆ. ಚುನಾವಣೆಯಲ್ಲಿ ಹೊಸ ಬೇರು ಹಳೆ ಚಿಗುರಿನ ಸಂಮಿಶ್ರಣವಾಗಿದೆ. ವಿಜಯೇಂದ್ರ ಪಕ್ಷದಲ್ಲಿ ಹಿರಿಯರಿದ್ದಾರೆ. ತಳ ಮಟ್ಟದಲ್ಲಿ ಸಂಘಟನೆ ಇದೆ. ಅವರ ಸೈನ್ಯ ತುಂಬಾ ಚೆನ್ನಾಗಿದ್ದು, ಅದರ ನೇತೃತ್ವವನ್ನು ಹೊಸ ದಳಪತಿ ವಹಿಸಿದ್ದಾರೆ. ಹೊಸ ನಾಯಕತ್ವ ಈ ರೀತಿ ಬರುತ್ತಿದ್ದರೆ ಅದು ಸಂಘಟನೆಯ ಜೀವಂತಿಕೆ. ಯಾವ ಸಂಘಟನೆ ಜೀವಂತಿಕೆ ಇರುವುದಿಲ್ಲವೋ ಅದು ಅಲ್ಲಲ್ಲೇ ಸುತ್ತುತ್ತಿರುತ್ತದೆ ಎಂದರು.
ರಾಜಕಾರಣದಲ್ಲಿ ಬೇರೆಯವರು ಅವರ ಮಕ್ಕಳನ್ನು ಅಧಿಕಾರಕ್ಕೆ ತಂದು ಕೂರಿಸುತ್ತಾರೆ. ಆದರೆ ಯಡಿಯೂರಪ್ಪ ಆ ರೀತಿ ಮಾಡಲಿಲ್ಲ. ವಿಜಯೇಂದ್ರ ಸಂಘಟನೆ ಮೂಲಕ ಸ್ವಯಂ ಪ್ರೇರಿತನಾಗಿ ಬೆಳೆದಿದ್ದಾನೆ. ಯುವಕರನ್ನು ಆಕರ್ಷಿಸುವ ಶಕ್ತಿ ಆತನಲ್ಲಿದೆ. ಈಗಾಗಿಯೇ ವಿಜಯೇಂದ್ರ ಅವರಿಗೆ ಉತ್ತರಾಧಿಕಾರಿ ಆಗುವ ಎಲ್ಲಾ ಅವಕಾಶಗಳು ಇದ್ದು, ಪಕ್ಷ ಈ ಬಗ್ಗೆ ಯೋಚಿಸಿದರೆ ಸೂಕ್ತ ಎಂದು ಆಯನೂರು ತಿಳಿಸಿದರು.