ನನ್ನ ಬಳಿ ಹಣವಿಲ್ಲ, ಲಾಯರ್ ಫೀಸ್ ಕಟ್ಟಲು 7.8 ಕೋಟಿ ಕೊಡಿ- ಲಂಡನ್ ಕೋರ್ಟ್‍ಗೆ ಮಲ್ಯ ಮನವಿ

Public TV
2 Min Read
VIJAY MALLYA

ಲಂಡನ್: ಬ್ಯಾಂಕುಗಳಿಗೆ ವಂಚನೆ ಪ್ರಕರಣದಲ್ಲಿ ಅಪರಾಧಿಯಾಗಿ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ ಲಾಯರ್ ಫೀಸ್ ಕಟ್ಟಲು ಮತ್ತೆ ಬ್ರಿಟಿಷ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ವಿಜಯ್ ಮಲ್ಯ, ಭಾರತದಲ್ಲಿನ ವಕೀಲರಿಗೆ ನೀಡಲು ನನ್ನ ಬಳಿ ಹಣವಿಲ್ಲ. ವಕೀಲರಿಗೆ ಹಣ ನೀಡಲು ಲಂಡನ್‍ನ ಕೋರ್ಟ್ ಫಂಡ್ಸ್ ಆಫೀಸ್‍ನಿಂದ 7.8 ಕೋಟಿ ರೂ. ಕೊಡಿ ಎಂದು ಮನವಿ ಮಾಡಿದ್ದಾರೆ.

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯರ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ನನ್ನ ಬಳಿ ಹಣವಿಲ್ಲ, ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಹೀಗಾಗಿ ಭಾರತದಲ್ಲಿನ ವಕೀಲರ ಶುಲ್ಕವನ್ನು ಭರಿಸಲು ನನ್ನಿಂದ ಆಗುತ್ತಿಲ್ಲ. ವಕೀಲರ ಶುಲ್ಕ ಪಾವತಿಸಲು 7.8 ಕೋಟಿ ರೂ. ನೀಡಿ ಎಂದು ಮಲ್ಯ ಮೇಲ್ಮನವಿ ಸಲ್ಲಿಸಿದ್ದಾರೆ.

vijay mallya 759

ಫೆಬ್ರವರಿಯಲ್ಲಿ ಡೆಪ್ಯೂಟಿ ಐಸಿಸಿ ನ್ಯಾಯಾಧೀಶ ಬರ್ನೆಟ್ ನೀಡಿದ ಆದೇಶವನ್ನು ಪ್ರಶ್ನಿಸಿ ವಿಜಯ್ ಮಲ್ಯ ಇದೀಗ ಹೈ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಬಾರ್ನೆಟ್ ಅವರು, ಭವಿಷ್ಯದ ಕಾನೂನು ಶುಲ್ಕ ಹಾಗೂ ತನ್ನ ಜೀವನ ಸಾಗಿಸಲು ಮಾಸಿಕ 23 ಲಕ್ಷ ರೂ.ಗಳನ್ನು ಕೋರ್ಟ್ ಫಂಡ್ಸ್ ಆಫೀಸ್‍ನಿಂದ ನೀಡಲು ಅನುಮತಿಸಿದ್ದರು. ಆದರೆ ಇದರಲ್ಲಿ ಭಾರತದಲ್ಲಿನ ವಕೀಲರಿಗೆ ನೀಡುವ ಹಣವನ್ನು ಸೇರಿಸಿರಲಿಲ್ಲ. ಹೀಗಾಗಿ ಇದೀಗ ಭಾರತದಲ್ಲಿನ ವಕೀಲರ ಶುಲ್ಕವನ್ನು ಸಹ ಕೋಟ್ರ್ಸ್ ಫಂಡ್ಸ್ ಆಫೀಸ್‍ನಿಂದ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 12 ಕೋಟಿ ರೂ. ಆಸ್ತಿಯನ್ನು ಬಳಸಲು ಮಲ್ಯಗೆ ಬರ್ನೆಟ್ ಅವರು ಆಗ ಅನುಮತಿ ನೀಡಿದ್ದರು.

ಈಗಾಗಲೇ ಮಲ್ಯ ಭಾರತದಲ್ಲಿನ ಕಾನೂನು ಸಂಸ್ಥೆಗಳಿಗೆ ನೀಡುವ 5.7 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ ಭಾರತದಲ್ಲಿನ ಭವಿಷ್ಯದ ಕಾನೂನು ವೆಚ್ಚಗಳಿಗಾಗಿ ಅವರಿಗೆ ಇನ್ನೂ 2 ಕೋಟಿ ರೂ. ಅಗತ್ಯವಿದೆ ಎಂದು ಬ್ರಿಟಿಷ್ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

FotoJet 14

ಮಲ್ಯ ಪರ ವಕೀಲ ಫಿಲಿಪ್ ಮಾರ್ಷಲ್ ಕ್ಯೂಸಿ ಅವರು ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದ್ದು, ನನ್ನ ಕಕ್ಷಿದಾರ ಈ ಪ್ರಕರಣಗಳಿಗೆ ಸ್ವತಃ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು ‘ಜೈಲುವಾಸ ಅನುಭವಿಸುತ್ತಿದ್ದಾರೆ’. ವಿಜಯ್ ಮಲ್ಯ ಅವರ ರಾಜಿ ಇತ್ಯರ್ಥದ 3 ಪ್ರೊಸಿಡಿಂಗ್ಸ್‍ಗಳು ಭಾರತದ ಸುಪ್ರೀಂ ಕೋರ್ಟ್ ಮುಂದಿವೆ. ತೀರ್ಪಿನ ಸಾಲದ ಮೇಲೆ ವಿಧಿಸಲಾಗುತ್ತಿರುವ ಶೇ.11.5 ಬಡ್ಡಿ ಹಾಗೂ ‘ಪರಾರಿಯಾದ ಆರ್ಥಿಕ ಅಪರಾಧಿ’ ಹಣೆಪಟ್ಟಿ ಕುರಿತು ಮೂರು ಸೆಟ್‍ಗಳ ವಿಚಾರಣೆಗಳು ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ನಡೆಯುತ್ತಿವೆ ಎಂದು ಅವರು ಹೇಳಿದರು.

ಬಡ್ಡಿದರ ಪಾವತಿಸುವ ಸವಾಲಿನಲ್ಲಿ ಮಲ್ಯ ಯಶಸ್ವಿಯಾದರೆ, ತೀರ್ಪಿನ ಸಾಲವನ್ನು 5,851 ಕೋಟಿ ರೂ.ಗೆ ಇಳಿಸಲಾಗುತ್ತದೆ. ಉಳಿದ ಹಣವನ್ನು ಆಸ್ತಿಗಳ ಮೂಲಕ ಪೂರೈಸಬಹುದು. ಅವರ ಆಸ್ತಿಗಳು ಮೂರನೇ ವ್ಯಕ್ತಿಗಳ ಕೊಡುಗೆಗಳಾಗಿವೆ. ರಾಜಿ ಇತ್ಯರ್ಥಕ್ಕೆ ಅನುಮೋದನೆ ನೀಡಿದರೆ ತೀರ್ಪಿನ ಸಂಪೂರ್ಣ ಸಾಲವನ್ನು ತೀರಿಸಲಾಗುತ್ತದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

vijay mallya

ಭಾರತದಲ್ಲಿನ ವಕೀಲರಿಗೆ ಸೂಚನೆ ನೀಡಲು ಅವಕಾಶ ನೀಡದಿರುವುದು ಆಕ್ರಮಣಕಾರಿ. ಅಲ್ಲದೆ ಭಾರತದಲ್ಲಿ ಈ ಪ್ರಕರಣಗಳು ಪ್ರಗತಿ ಸಾಧಿಸುತ್ತಿಲ್ಲ. ವಿಚಾರಣೆಗಳು ಪ್ರಗತಿ ಸಾಧಿಸದಿರಲು ಹಣದ ಕೊರತೆ ಹಾಗೂ ಕೊರೊನಾ ಪರಿಸ್ಥಿತಿ ಕಾರಣ ಎಂದು ಮಲ್ಯ ಪರ ವಕೀಲ ಮಾರ್ಷಲ್ ಅವರು ಕೋರ್ಟ್‍ಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *