ನೆಲಮಂಗಲ: ಮಾರಾಣಾಂತಿಕ ಕೋವಿಡ್-19 ನಲ್ಲಿ ದಿನನಿತ್ಯ ಪಾಲ್ಗೊಳ್ಳುವ ಕೊರೊನಾ ವಾರಿಯರ್ಸ್ ರದ್ದು ಹಲವಾರು ಮಾನಸಿಕ ಮುಖಗಳು ಅನಾವರಣಗೊಳ್ಳುತ್ತಿದೆ. ಮತ್ತೊಂದು ಕೊರೊನಾ ವಾರಿಯರ್ಸ್ ಕಥೆ ವ್ಯಥೆ ಇದೀಗ ಅಭಿನಂದನಾ ಸಮಾರಂಭದಲ್ಲಿ ಕಂಡು ಬಂದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಖಾಸಗಿ ಸಂಭಾಗಣದಲ್ಲಿ, ಕೊರೊನಾ ವಾರಿಯರ್ಸ್ ಗಳಿಗೆ ಅಭಿನಂದನಾ ಮತ್ತು ಪುಷ್ಪವೃಷ್ಟಿ ಹಾಕುವ ಕಾರ್ಯಕ್ರಮವನ್ನು ಸ್ಥಳೀಯ ಜಿಲ್ಲಾ ಪಂಚಾಯತಿ ಸದಸ್ಯ ನಂಜುಂಡಯ್ಯ ಆಯೋಜಿಸಿದ್ದರು. ಈ ವೇಳೆಯಲ್ಲಿ ಅಭಿನಂದನಾ ಸಮಾರಂಭದಲ್ಲಿ ನೆಲಮಂಗಲ ತಾಲೂಕಿನ ನರಸೀಪುರ ಗ್ರಾಮ ಪಂಚಾಯತಿ ಪಿಡಿಒ ಶೀಲಾ ಗದ್ಗದಿತರಾಗಿದ್ದಾರೆ.
ವೇದಿಕೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನರಸೀಪುರ ಗ್ರಾಮ ಪಂಚಾಯತಿ ಪಿಡಿಒ, ಪುಟಾಣಿ ನನ್ನ ಮಕ್ಕಳ ಬಳಿ ಹೋಗಲು ಆಗುತ್ತಿಲ್ಲ ಎಂದು ಭಾವುಕರಾಗಿದ್ದಾರೆ. ಮಾರಣಾಂತಿಕ ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಕೊರೊನಾ ವಾರಿಯರ್ಸ್ ಗಳಾದ ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಇನ್ನೀತರ ಇಲಾಖೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವೈದ್ಯರು ರೋಗಿಯ ಬಳಿಯೇ ಇರುತ್ತಾರೆ. ಕೊರೊನಾ ಆತಂಕವಿದ್ದರೂ ವ್ಯಕ್ತಪಡಿಸಲಾಗದ ಸನ್ನಿವೇಶದಲ್ಲಿದ್ದೇವೆ. ಯಾರದ್ದೋ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಾರೆ ಎಂದು ಕೊರೊನಾ ರೋಗಿಗಳಿಗೆ ತಮ್ಮ ನೋವನ್ನು ಪರೋಕ್ಷವಾಗಿ ತಿಳಿಸಿದರು. ಮಹಿಳಾ ಪಿಡಿಒ ಕಣ್ಣೀರಿನೊಂದಿಗೆ ಸಮಾರಂಭದಲ್ಲಿ ಮಾತನಾಡಿದ ರೀತಿ ಹಲವರಿಗೆ ಸ್ಫೂರ್ತಿಯಾಗಿತ್ತು.