ಬೆಂಗಳೂರು: ನನ್ನ ಎದೆ ಬಗೆದರೂ ಸಿಎಂ ಯಡಿಯೂರಪ್ಪ ಅವರು ಇದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಎದೆ ಬಗೆದರೂ ಅಲ್ಲಿ ಯಡಿಯೂರಪ್ಪನವರು ಇದ್ದಾರೆ. ಬಗೆದು ತೋರಿಸಬೇಕಾ ಎಂದು ಎದೆ ಮುಟ್ಟಿಕೊಂಡರು. ಇದು ಈ ಹಿಂದೆ ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಅವರಿಗೆ ಹೇಳಿದ ಮಾತನನ್ನು ನೆನಪಿಸುವಂತಿತ್ತು.
ರಾಜ್ಯ ಸಭೆಯ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮಗಳು ವರ್ಣರಂಜಿತವಾಗಿ ತೋರಿಸುತ್ತೀರಾ. ಇಬ್ಬರು ನಾಯಕರನ್ನು ಪಕ್ಷ ಆಯ್ಕೆ ಮಾಡಿದೆ. ಅವರು ತಳಮಟ್ಟದಿಂದ ಕೆಲಸ ಮಾಡಿದ್ದಾರೆ. ಹೈಕಮಾಂಡ್ ಹೇಳಿದ ಮೇಲೆ ಒಪ್ಪಿಕೊಳ್ಳಬೇಕು. ಮಾಧ್ಯಮಗಳು ನಿಮಗೆ ಬೇಕಾದ ಹಾಗೆ ಸುದ್ದಿ ಮಾಡಿಕೊಳ್ಳಿ. ಕೋರ್ ಕಮಿಟಿ ಮೀಟಿಂಗ್ನಲ್ಲಿ ಯಾರ ಹೆಸರು ಹೋಗಿತ್ತು ಎಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಬಿಎಲ್ ಸಂತೋಷ್ ವಿಚಾರವಾಗಿ ಸಚಿವ ಸಿಟಿ ರವಿ ಅವರ ಹೇಳಿಕೆ ವಿಚಾರ ಕೇಳಿದಾಗ, ಅದನ್ನು ಅವರ ಬಳಿಯೇ ಕೇಳಿ ಎಂದರು. ಜೊತೆಗೆ ಕೊರೊನಾ ಸಮಯದಲ್ಲಿ ಯಡಿಯೂರಪ್ಪ ಅವರ ಕೆಲಸವನ್ನು ಮೋದಿ ಮತ್ತು ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ನಾವು ಅವರನ್ನು ಒಪ್ಪಿಕೊಂಡಿದ್ದೇವೆ. ಹೀಗಿರುವಾಗ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲ ಎಂದರು.
ಇದೇ ವೇಳೆ ಉಮೇಶ್ ಕತ್ತಿಯವರ ಬಂಡಾಯ ಸಭೆ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಉಮೇಶ್ ಕತ್ತಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿ ನಾವು ಯಾವುದೇ ರಾಜಕೀಯ ಮಾಡಲು ಹೋಗಿಲ್ಲ. ಊಟ ಮಾಡಲು ಹೋಗಿದ್ದವು ಎಂದು ಈ ಬಗ್ಗೆ ಮತ್ತೆ ನಾನು ಮಾತನಾಡುವುದಿಲ್ಲ. ಯತ್ನಾಳ್ ಅವರು ಏನೋ ಹೇಳಿದ ತಕ್ಷಣ ಯಡಿಯೂರಪ್ಪ ಅವರ ವರ್ಚಸ್ಸು ಕಡಿಮೆ ಆಗಲ್ಲ ಎಂದು ಕಿಡಿಕಾರಿದರು.
https://www.facebook.com/publictv/posts/4369546059729779