– ಕಾಲ್ ಮಾಡಿ ಮಗನಿಗೆ ಅವಕಾಶ ಕೊಡಿಯೆಂದು ಯಾರನ್ನೂ ಕೇಳಿಲ್ಲ
ಮುಂಬೈ: ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ನಲ್ಲಿ ನೆಪೊಟಿಸಂ (ಸ್ವಜನಪಕ್ಷಪಾತ) ಬಹಳ ಸದ್ದು ಮಾಡುತ್ತಿದೆ. ಅದರಲ್ಲೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಬಾಲಿವುಡ್ನ ಹಲವಾರು ಮಂದಿ ಮೂವಿ ಮಾಫಿಯಾ ಮತ್ತು ಬಾಲಿವುಡ್ ನೆಪೊಟಿಸಂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಪೊಟಿಸಂ ಹೆಸರು ಬಾಲಿವುಡ್ನಲ್ಲಿ ಕೇಳಿ ಬಂದಾಗ ಹಲವಾರು ಮಂದಿ ನಟ ಅಭಿಷೇಕ್ ಬಚ್ಚನ್ ಕಡೆ ಬೊಟ್ಟು ಮಾಡುತ್ತಾರೆ.
ಈಗ ನೆಪೋಟಿಸಂ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಭಿಷೇಕ್ ಬಚ್ಚನ್ ಅವರು, ಕೆಲವರು ನೆಪೋಟಿಸಂ ಪದ ಕೇಳಿದ ತಕ್ಷಣ ನನ್ನ ಕಡೆ ಬೊಟ್ಟು ಮಾಡುತ್ತಾರೆ. ಆದರೆ ಇದುವರೆಗೂ ನನ್ನ ಅಪ್ಪ ಯಾವ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಫೋನ್ ಮಾಡಿ ನನ್ನ ಮಗನಿಗೆ ಚಾನ್ಸ್ ಕೊಡಿ ಎಂದು ಕೇಳಿಲ್ಲ. ಜೊತೆಗೆ ಅವರೆಂದು ನನಗಾಗಿ ಒಂದು ಸಿನಿಮಾವನ್ನು ಮಾಡಿಲ್ಲ. ಹೀಗಿದ್ದರೂ ಜನ ನನ್ನ ಕಡೆ ಯಾಕೆ ಬೊಟ್ಟು ಮಾಡುತ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಜೊತೆಗೆ ನಮ್ಮದೇ ಸಿನಿಮಾ ನಿರ್ಮಾಣದ ಸಂಸ್ಥೆ ಇದ್ದರೂ ಅದರಲ್ಲಿ ನನ್ನ ಸಿನಿಮಾಗಳನ್ನು ನನ್ನ ತಂದೆ ನಿರ್ಮಾಣ ಮಾಡಿಲ್ಲ. ಆದರೆ ನಾನು ನನ್ನ ಚಿತ್ರ ನಿರ್ಮಾಣ ಸಂಸ್ಥೆಯಿಂದ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ನಮ್ಮ ತಂದೆಯ ಹೆಸರಿನಿಂದ ಬಾಲಿವುಡ್ಗೆ ಬರಲು ಸುಲಭ ಆಯ್ತು. ನಿಜ ಆದರೆ ಇಲ್ಲಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಸಿನಿಮಾಗಾಗಿ ಕಷ್ಟಪಟ್ಟಿದ್ದೇನೆ. ಹೀಗಿರುವಾಗ ಇಲ್ಲಿ ನೆಪೊಟಿಸಂ ಹೇಗೆ ಬರುತ್ತದೆ ಎಂದು ಅಭಿಷೇಪ್ ಪ್ರಶ್ನೆ ಮಾಡಿದ್ದಾರೆ.
ಬಾಲಿವುಡ್ನಲ್ಲಿ ಸದ್ಯ ಹಳೆ ಹೀರೋ, ವಿಲನ್, ನಿರ್ಮಾಪಕ ಮತ್ತು ನಿರ್ದೇಶಕರ ಮಕ್ಕಳೇ ಹೆಚ್ಚು ನಟ-ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ನೆಪೋಟಿಸಂ ಜಾಸ್ತಿ ಹೊರಗಿನಿಂದ ಬರುವ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ ಎಂದು ಕೆಲವರು ದೂರುತ್ತಾರೆ.