ತುಮಕೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಬಿರುಸಾಗುತ್ತಿದೆ. ಸಹಜವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಸಮಾರಂಭವೊಂದರಲ್ಲಿ “ನನ್ನನ್ನು ಮುಂದಿನ ಸಿಎಂ ಎಂದು ಹೇಳಬೇಡಿ, ಆ ಪದವೇ ನನಗೆ ಡೇಂಜರ್ ಆಗುತ್ತದೆ” ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಗಂಕಾರನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಸಭಿಕರೊಬ್ಬರು ‘ಮುಂದಿನ ಸಿಎಂ ಪರಮೇಶ್ವರ್’ ಎಂದು ಘೋಷಣೆ ಕೂಗಿದ್ದಾರೆ. ಈ ಮಾತಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ‘ಸಿಎಂ ಪದ ಹೇಳಬೇಡಿ, ನನಗೆ ಡೇಂಜರ್ ಆಗುತ್ತದೆ’ ಎಂದು ಹೇಳಿದ್ದಾರೆ.
ಚುನಾವಣೆಗೆ ಎರಡು ವರ್ಷ ಬಾಕಿ ಇದೆ, ಈಗಲೇ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಶುರುವಾದರೆ, ಪಕ್ಷದ ನಾಯಕರಲ್ಲಿ ಶೀಥಲ ಸಮರಕ್ಕೆ ಕಾರಣವಾಗುತ್ತದೆ. ಇದು ಮುಂದೆ ತಮ್ಮ ಚುನಾವಣೆಗೆ ತೊಡಕಾಗಬಹುದು ಎಂಬ ಆತಂಕವೂ ಪರಮೇಶ್ವರ್ ಮನಸ್ಸಿನಲ್ಲಿದೆ. ಹೀಗಾಗಿಯೇ ಪರಮೇಶ್ವರ್ ಈಗಲೇ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸದಂತೆ ಮನವಿ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ರೇಸ್ ನಲ್ಲಿ ಸ್ಥಾನ ಕಾಯ್ದುಕೊಂಡಿದ್ದು, ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್ ಸಿಎಂ ಫೈಟ್ ಕತ್ತಲ ಕೋಣೆಯಲ್ಲಿ ಇಲ್ಲದ ಕರಿಬೆಕ್ಕಿನ ಹುಡುಕಾಟದಂತಿದೆ: ಈಶ್ವರಪ್ಪ