ನವದೆಹಲಿ : ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಆಹಾರ ಖಾತೆ ಸಚಿವರಾಗಿದ್ದ ಹಿರಿಯ ನಾಯಕ ಉಮೇಶ್ ಕತ್ತಿ ಈಗ ಸಿಎಂ ಬಸವರಾಜ್ ಬೊಮ್ಮಾಯಿಗಿಂತಲೂ ಮುಂಚೆ ದೆಹಲಿ ತಲುಪಿದ್ದು ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದು ಶೀಘ್ರದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ. ಈ ಹಿನ್ನಲೆ ಸಂಪುಟ ಸೇರಲು ಲಾಬಿ ಶುರುವಾಗಿದ್ದು ಕೆಲವು ಹಿರಿಯ ನಾಯಕರು ಈಗ ದೆಹಲಿಯಲ್ಲಿರುವ ವರಿಷ್ಠರ ಮನೆ ಕದ ತಟ್ಟಲು ಶುರು ಮಾಡಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಬೊಮ್ಮಾಯಿ ಸರಕಾರದಲ್ಲಿ ಮಂತ್ರಿ ಆಗುತ್ತೇನೆ ಎಂಬ ನಂಬಿಕೆ ಇದೆ. ನನ್ನನ್ನು ಬಿಟ್ಟು ಕ್ಯಾಬಿನೆಟ್ ಮಾಡಲ್ಲ ಎಂದುಕೊಂಡಿದ್ದೇನೆ. ಹಿಂದೆ ನಾಲ್ಕು ಬಾರಿ ಮಂತ್ರಿಯಾಗಿದ್ದೇನೆ. ಮುಂದೆಯೂ ಆಗುತ್ತೇನೆ ಎಂಬ ನಂಬಿಕೆ ಇದೆ. ಅಖಂಡ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಇದನ್ನೂ ಓದಿ : ನನ್ನ ಪ್ರೀತಿಯ ಊರು ಹುಬ್ಬಳ್ಳಿ : ಸಿಎಂ ಬೊಮ್ಮಾಯಿ
ಮಂತ್ರಿಯಾಗದಿದ್ದರೆ ಶಾಸಕನಾಗಿ ಮುಂದುವರೆಯುತ್ತೇನೆ. ಅಮಿತ್ ಶಾ, ಜೆ.ಪಿ ನಡ್ಡಾ, ಬಿ.ಎಲ್ ಸಂತೋಷ್ ಭೇಟಿಗೆ ಸಮಯ ಕೇಳಿದ್ದೇನೆ. ಅವಕಾಶ ಸಿಕ್ಕಲ್ಲಿ ಭೇಟಿ ಮಾಡುವೆ ಎಂದ ಅವರು, ಹಿರಿಯ ನಾಯಕರಿಗೆ ಕೊಕ್ ಎನ್ನುವುದು ಮಾಧ್ಯಮದ ವರದಿಯಷ್ಟೇ. ಜಗದೀಶ್ ಶೆಟ್ಟರ್ ಹೇಳಿಕೆ ವೈಯಕ್ತಿಕ ಎಂದು ಕತ್ತಿ ಪ್ರತಿಕ್ರಿಯಿಸಿದರು.