ಚಿತ್ರದುರ್ಗ: ಕೊರೊನಾ ವ್ಯಾಕ್ಸಿನ್ ಪಡೆಯಲು ಜನರು ನಾ ಮುಂದು, ತಾ ಮುಂದು ಅಂತ ಮುಗಿ ಬೀಳುತ್ತಿದ್ದಾರೆ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿಯ ವೃದ್ದೆ ಹನುಮಕ್ಕ (61), ಮಾತ್ರ ನನಗೆ ಕೊರೊನಾ ಬಂದರೆ ಬರಲಿ, ಬಿಟ್ಟರೆ ಬಿಡಲಿ ವ್ಯಾಕ್ಸಿನ್ ಮಾತ್ರ ಬೇಡ ಎಂದಿದ್ದಾರೆ.
ಕೆ.ಆರ್ ಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ನರ್ಸರಿಯಲ್ಲಿ ಗಿಡ ಸಾಕಣೆ ಕೆಲಸ ಮಾಡುವ ಈ ವೃದ್ಧೆ ಹನುಮಕ್ಕನಿಗೆ ಗ್ರಾಮದ ಯುವಕರು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಕೊರೊನಾ ಭೀತಿ ಇಲ್ಲದೇ ಯುವಕರಿಗೆ ತಿರುಗೇಟು ನೀಡಿರುವ ವೃದ್ದೆಯೂ ನನಗೆ ಯಾವುದೇ ರೋಗವಿಲ್ಲ. ಅದರಲ್ಲೂ ಬಿಪಿ, ಶುಗರ್ ಕೂಡ ನನಗಿಲ್ಲ. ನಾನು ಗುಂಡುಕಲ್ಲು ಇದ್ದಂಗೆ ಇದ್ದೀನಿ ಎಂದು ಧೈರ್ಯವಾಗಿ ಹೇಳಿದ್ದಾರೆ. ಇದನ್ನು ಓದಿ: ವೇಷಭೂಷಣ ತೊಟ್ಟು ಬೆಣ್ಣೆ ನಗರಿ ಯುವಕರಿಂದ ಕೊರೊನಾ ಜಾಗೃತಿ
ಎಲ್ಲೆಡೆ ಬಾರಿ ಬೇಡಿಕೆಯಿಂದ ಜನರು ಕೊರೊನಾ ವ್ಯಾಕ್ಸಿನ್ಗಾಗಿ ಮುಗಿ ಬೀಳುತ್ತಿದ್ದಾರೆ. ಆದರೆ ನನಗೆ ಆ ವ್ಯಾಕ್ಸಿನ್ನ ಅಗತ್ಯವಿಲ್ಲ. ಅಂತಹ ಸಮಸ್ಯೆ ಏನಾದರು ಉಲ್ಬಣಿಸಿದರೆ ನಮ್ಮ ನರ್ಸರಿಯಲ್ಲಿರುವ ಬೇವಿನ ಚೆಕ್ಕೆಯೇ ನನಗೆ ವ್ಯಾಕ್ಸಿನ್ ಎನಿಸಿದೆ. ಹೀಗಾಗಿ ನಿತ್ಯ ನಾನು ಬೇವಿನ ಚೆಕ್ಕೆ ಕಾಯಿಸಿ, ಕುದಿಸಿ ಕುಡಿಯುತ್ತೇನೆ. ಆದರಿಂದ ನನಗೆ ಯಾವುದೇ ಕೊರೊನಾ ಸೋಂಕಿನ ಭಯವಿಲ್ಲ. ಈವರೆಗೆ ಯಾವುದೇ ಸಮಸ್ಯೆ ಸಹ ನನಗೆ ಎದುರಾಗಿಲ್ಲ ಎಂದು ವೃದ್ಧೆ ಹೇಳಿದ್ದಾರೆ. ಒಟ್ಟಾರೆ ಅಜ್ಜಿಯ ಗಟ್ಟಿತನ ನೋಡಿದ ಕೋಟೆನಾಡಿನ ಜನರಲ್ಲಿ ಬಾರಿ ಅಚ್ಚರಿ ಮೂಡಿಸಿದೆ. ಇದನ್ನು ಓದಿ: ಸರ್ಕಸ್ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಿಸಿದ ಶಾಸಕ ಗಣೇಶ ಹುಕ್ಕೇರಿ