– ಮಹಿಳೆಯರಿಗಾಗಿ ಬಜೆಟ್ ನಲ್ಲಿ 33 ಸಾವಿರ ಕೋಟಿ ಇಟ್ಟಿದ್ದೇನೆ
ರಾಯಚೂರು: ನನಗೆ ಜಾತಿ ಗೊತ್ತಿಲ್ಲ. ಎಲ್ಲರನ್ನೂ ಒಂದೇ ರೀತಿಯಾಗಿ ನೋಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಸ್ಕಿ ಉಪಚುನಾವಣೆ ತುರವಿಹಾಳದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಹಣ ಹೆಂಡ ತೋಳ್ ಬಲದಿಂದ ಜಾತಿ ವಿಷಬೀಜ ಬಿತ್ತಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ನಮ್ಮ ಅಭ್ಯರ್ಥಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ತಾರೆ. ನನಗೆ ಜಾತಿ ಗೊತ್ತಿಲ್ಲ ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದೇನೆ ಎಂದರು.
ರೈತರಿಗೆ ಬೆಂಬಲ ಬೆಲೆ ನೀಡಿದ್ದೇನೆ, ಅಂಗವಿಕಲ ವೇತನ, ವಿಧವಾ ವೇತನ ನೀಡುತ್ತಿದ್ದೇನೆ. ಮಹಿಳೆಯರಿಗಾಗಿ ಬಜೆಟ್ ನಲ್ಲಿ 33 ಸಾವಿರ ಕೋಟಿ ಇಟ್ಟಿದ್ದೇನೆ. ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತೇ, ಕಾಂಗ್ರೆಸ್ ಮುಳುಗುತ್ತಿದೆ. ಇಂದು ನಾಳೆಯಿಂದ ಭತ್ತ ಖರೀದಿ ಕೇಂದ್ರ ಆರಂಭವಾಗುತ್ತೆ. ರೈತರಿಗೆ ಅನುಕೂಲವಾಗಲಿ ಅಂತ ನಿಮ್ಮ ಬೇಡಿಕೆ ಈಡೇರಿಸುತ್ತಿದ್ದೇನೆ ಎಂದು ತಿಳಿಸಿದರು.
ಕನಕನಾಲಾ ಯೋಜನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಕಲ್ಯಾಣ ಕರ್ನಾಟಕ್ಕೆ ಒಂದೂವರೆ ಸಾವಿರ ಕೋಟಿ ತೆಗೆದಿಟ್ಟಿದ್ದೇನೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಮಾಡುತ್ತೇನೆ. ತುಂಗಭದ್ರಾ ಜಲಾಶಯಕ್ಕೆ ನವಲಿ ಬಳಿ ಪರ್ಯಾಯ ಜಲಾಶಯ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ. ಕಾಗಿನೆಲೆ ಅಭಿವೃದ್ಧಿಗೆ 10 ಕೋಟಿ ಕೊಟ್ಟಿದ್ದೇನೆ ಎಂದು ವಿವರಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹೇಳ್ತೀನಿ ಪ್ರತಾಪ್ ಗೌಡ ಗೆಲ್ಲಬೇಕು. 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರೆ ನೀವು ಏನೇ ಕೇಳಿದರೂ ಮಾಡಿಕೊಡುತ್ತೇನೆ. ಏ 17 ಆದಮೇಲೆ ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಕಾಂಗ್ರೆಸ್ ಅಡ್ರೆಸ್ ಇರಲ್ಲ. ಪ್ರತಾಪ್ ಗೌಡರನ್ನ ಗೆಲ್ಲಿಸಿ. 50 ಸಾವಿರ ಜನರನ್ನ ಸೇರಿಸಿ ವಿಜಯೋತ್ಸವ ಆಚರಿಸೋಣ ಎಂದು ಸಿಎಂ ಕರೆ ನೀಡಿದರು.