ಮೈಸೂರು: ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ವಾಕ್ಸಮರ ಮುಂದುವರಿದಿದೆ. ಜಿಟಿ ದೇವೇಗೌಡರು ತಮ್ಮನ್ನು ಶಕುನಿ, ಮಂಥರೆಗೆ ಹೋಲಿಸಿ ಟೀಕಿಸಿದ್ದನ್ನು ಪ್ರಸ್ತಾಪಿಸಿ ಮಾಜಿ ಮಂತ್ರಿ ಸಾರಾ ಮಹೇಶ್ ಕಣ್ಣೀರು ಹಾಕಿದ್ದಾರೆ. ನಾನು ಏನು ಅನ್ಯಾಯ ಮಾಡಿದ್ದೇ ಅವರಿಗೆ.. ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಿ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎನ್ನುತ್ತಾ ಗದ್ಗದಿತರಾಗಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ಶಕುನಿ ಇರದೇ ಮಹಾಭಾರತ ನಡೆಯುತ್ತಿತ್ತಾ? ಧರ್ಮರಾಜ್ಯ ಸ್ಥಾಪನೆ ಆಗುತ್ತಿತ್ತಾ..? ಮಂಥರೆ ಇರದೆ ಇದ್ದರೆ ರಾಮಾಯಣ ನಡೆಯುತ್ತಿತ್ತಾ? ಅಂತ ಜಿಟಿಡಿಗೆ ತಿರುಗೇಟು ನೀಡಿದ್ರು. ನನಗೆ ಕಣ್ಣೀರು ಹಾಕಿಸಿದವರು ಉದ್ಧಾರ ಆಗಿಲ್ಲ ಅಂದ್ರು.
ನೀವೆಷ್ಟೇ ಟೀಕೆ ಮಾಡಿದರೂ ನೀವೇ ನಮ್ಮ ನಾಯಕರು. ನಾನ್ಯಾವತ್ತು ನಿಮ್ಮ ಜೊತೆ ಪೈಪೋಟಿ ಮಾಡಿಲ್ಲ. ಬನ್ನಿ ನಾಳೆಯೇ ಪಕ್ಷದ ಜವಾಬ್ದಾರಿ ಹೊತ್ತುಕೊಳ್ಳಿ ಅಂತ ಜಿ.ಟಿ.ದೇವೇಗೌಡಗೆ ಸಾರಾ ಮಹೇಶ್ ಸವಾಲು ಹಾಕಿದರು.
ನನ್ನನ್ನು ಹತ್ತಾರು ಬಾರಿ ಟೀಕೆ ಮಾಡಿದ್ದರು ಅವರನ್ನು ನಮ್ಮ ನಾಯಕರು ಅಂತಾ ಹೇಳಿದ್ದೇನೆ. ನಿಮ್ಮ ಬಗ್ಗೆ ನನಗೆ ಗೌರವವಿದೆ. ನೀವು ಎಷ್ಟೆ ಟೀಕೆ ಮಾಡಿದರು ನಿಮ್ಮ ಮೇಲೆ ನನಗೆ ಗೌರವವಿದೆ. ಯಾಕೆ ನನ್ನನ್ನು ಇಷ್ಟು ದ್ವೇಷ ಮಾಡುತ್ತೀದ್ದಿರಾ? ನನ್ನಿಂದ ನಿಮಗೆ ನೋವಾಗಿದ್ದರೆ ನಾನು ಈ ಅವಧಿ ಮುಗಿದ ಮೇಲೆ ಸಾರ್ವಜನಿಕ ಜೀವನದಿಂದ ನಿವೃತ್ತನಾಗುತ್ತೇನೆ. ಜಿಟಿಡಿಗಿಂತಾ ಶಾಸಕರ ಅವಧಿ ನಾನೇ 6 ತಿಂಗಳು ಜಾಸ್ತಿ. ಅವರು ಒಟ್ಟಾರೆ 172 ತಿಂಗಳು ಶಾಸಕರು ಆಗಿದ್ದಾರೆ. 180 ತಿಂಗಳು ಶಾಸಕನಾಗಿದ್ದೇನೆ. ಒಬ್ಬರು ನನ್ನನ್ನು ಚಾಮುಂಡಿ ಬೆಟ್ಟದಲ್ಲಿ ಕಣ್ಣೀರು ಹಾಕಿಸಿ ಅನುಭವಿಸುತ್ತೀದ್ದಾರೆ. ನೀವು ಚಾಮುಂಡಿ ಬೆಟ್ಟದಲ್ಲಿ ನನ್ನನ್ನು ಹೀನಾಯವಾಗಿ ಟೀಕೆ ಮಾಡಿ ಇಂದು ಕಣ್ಣೀರು ಹಾಕಿಸಿದ್ದೀರಿ ಎಂದು ಹೇಳಿದರು.
ಕುಮಾರಸ್ವಾಮಿ ನನ್ನ ನಾಯಕರು ನಾನು ಅವರ ನಿಷ್ಠಾವಂತ ಕಾರ್ಯಕರ್ತ ಅಷ್ಟೆ. ನಾನು ಇಲ್ಲದೆ ಇದ್ದರು ಜೆಡಿಎಸ್ ಇರುತ್ತೆ, ಯಾರು ಇರದಿದ್ದರು ಪಕ್ಷ ಇರುತ್ತೆ. ನಿನ್ನೆಯ ಚುನಾವಣೆ ಫಲಿತಾಂಶ ಸಮಾಧಾನವಿದೆ. ಬಿಜೆಪಿ, ಕಾಂಗ್ರೆಸ್ ಅವರ ಜೊತೆ ಜಿಟಿಡಿ ಸೇರಿ ಗೆದ್ದಿದ್ದಾರೆ. ಇಷ್ಟರ ನಡುವೆ ಮೂರು ಸ್ಥಾನ ಗೆದ್ದಿರೋದು ನಮಗೆ ಸಮಾಧಾನವಿದೆ ಎಂದರು.