ಲಕ್ನೋ: ನಡು ರಸ್ತೆಯಲ್ಲಿ ವ್ಯಕಿಯೊಬ್ಬನನ್ನು ತಂಡವೊಂದು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಬುಧವಾರ ನಡೆದಿದೆ. ಮೃತ ವ್ಯಕ್ತಿ ರಾಜಕಾರಣಿ ಮುಖ್ತಾರ್ ಅನ್ಸಾರಿ ಆಪ್ತ ಸಹಾಯಕ ಎಂದು ತಿಳಿದುಬಂದಿದೆ.
ವಿಭೂತಿ ಖಾಂಡ್ನ ನಡುರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಆತನ ಜೊತೆ ಇದ್ದ ಮತ್ತೊಬ್ಬ ವ್ಯಕ್ತಿ ಮೋಹನ್ ಸಿಂಗ್ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾನೆ.
ಅಜೀತ್ ಸಿಂಗ್ ಉತ್ತರ ಪ್ರದೇಶದ ಮಾವುವಿನ ಮಾಜಿ ಬ್ಲಾಕ್ ಪ್ರಮುಖ್ ಆಗಿದ್ದರು. ಗ್ಯಾಂಗ್ ಒಂದು ಆತ ಇದ್ದ ಸ್ಥಳಕ್ಕೆ ಧಾವಿಸಿ ಆತನನ್ನು ಹಾಗೂ ಆತನ ಜೊತೆ ಇದ್ದವನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ ಘಟನೆ ವೇಳೆ ರಸ್ತೆಯಲ್ಲಿ ಹಾದು ಹೋಗುವಾಗ ಆಹಾರ ವಿತರಣಾ ಏಜೆಂಟ್ ಆಕಾಶ್ ಎಂಬ ವ್ಯಕ್ತಿಯ ಕಾಲಿಗೆ ಬುಲೆಟ್ ತಗುಲಿ ಗಾಯವಾಗಿದೆ ಹಾಗೂ ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ ಮತ್ತು ಅಜೀತ್ ಸಿಂಗ್ ಸಹಚರರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಜೀತ್ ಸಿಂಗ್ ಅವರ ಸಹವರ್ತಿ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿರುವುದಾಗಿ ಲಕ್ನೋ ಪೊಲೀಸ್ ಆಯುಕ್ತ ಡಿಕೆ ಠಾಕೂರ್ ತಿಳಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಕುಲಂಕುಶವಾಗಿ ತನಿಖೆ ನಡೆಸಿದ ಡಿಕೆ ಠಾಕೂರ್ ಈ ಘಟನೆ ಬುಧವಾರ ರಾತ್ರಿ 8 ರಿಂದ ರಾತ್ರಿ 8.45ರ ಸುಮಾರಿನಲ್ಲಿ ನಡೆದಿದೆ. ಸಿಂಗ್ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ಈವರೆಗೂ ಸುಮಾರು 17-18 ಪ್ರಕರಣಗಳು ದಾಖಲಾಗಿವೆ. ಘಟನೆ ಕುರಿತಂತೆ ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.