ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಎಸ್ಡಿ(ಆಂತರಿಕ ಭದ್ರತಾ ವಿಭಾಗ) ವಿಚಾರಣೆ ಎದುರಿಸಿರುವ ನಟ ಲೂಸ್ ಮಾದ ಯೋಗಿ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಹೌದು. ಯೋಗಿ ತಡರಾತ್ರಿ ಪಾರ್ಟಿ ಕಿರಿಕ್ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರ ಜೊತೆ ಯೋಗಿ ಕಿರಿಕ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಅಪಾರ್ಟ್ಮೆಂಟ್ ನವರು ಮೂರು ದಿನಗಳ ಹಿಂದೆ ಯೋಗಿ ವಿರುದ್ಧ ಪೊಲೀಸರಿಗೆ ಮೌಖಿಕ ದೂರು ನೀಡಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ತಡರಾತ್ರಿಯವರಿಗೆ ಗಲಾಟೆ ಆಗುತ್ತಿದ್ದರಿಂದ ಬೇಸತ್ತ ಅಪಾರ್ಟ್ ಮೆಂಟ್ ನವರು ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಗಿರಿನಗರ ಪೊಲೀಸರು ಭೇಟಿ ನೀಡಿದ್ದಾರೆ. ಇದೇ ವೇಳೆ ಗಲಾಟೆ ಮಾಡದಂತೆ ಲೂಸ್ ಮಾದ ಯೋಗಿ ಹಾಗೂ ತಂಡಕ್ಕೆ ಪೊಲೀಸರು ವಾರ್ನ್ ಮಾಡಿ ಬಂದಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ 11 ಗಂಟೆ ವೇಳೆಗೆ ಐಎಸ್ಡಿಗೆ ಯೋಗಿ ಹಾಜರಾಗಿದ್ದರು. 11 ಗಂಟೆಯಿಂದ 3 ಗಂಟೆ ವರೆಗೆ ನಟ ಯೋಗಿಯ ವಿಚಾರಣೆ ನಡೆದಿತ್ತು. ಯೋಗಿ ಜೊತೆ ಒಬ್ಬ ಡೈರೆಕ್ಟರ್ ರನ್ನ ಸಹ ವಿಚಾರಣೆ ನಡೆಸಲಾಗಿದೆ. ನಿದೇರ್ಶಕನಿಗೆ ಕೂಡ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಇದೇ ತಿಂಗಳ 19ರಂದು ರಶ್ಮಿತಾ ಚಂಗಪ್ಪ ಮತ್ತು ಎನ್ ಸಿ ಅಯ್ಯಪ್ಪರನ್ನ ಐಎಸ್ಡಿ ವಿಚಾರಣೆ ನಡೆಸಿತ್ತು.
ಇತ್ತ ಮಗನ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯೋಗಿ ತಾಯಿ ಅಂಬುಜಾ, ನನ್ನ ಮಗನಿಗೆ ಯಾವುದೇ ಡ್ರಗ್ಸ್ ಅಭ್ಯಾಸವಿಲ್ಲ. ನನ್ನ ಮಗನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಯೋಗಿ ಹೆಚ್ಚು ಸೈಲೆಂಟ್ ಆಗಿರುತ್ತಾನೆ ಅಷ್ಟೇ. ಈಗ ವಿಚಾರಣೆ ಹೋಗಿ ಬಂದ ನಂತರವೂ ಅವರು ಆರಾಮಗಿದ್ದಾರೆ. ಈ ಬಗ್ಗೆ ಕೆಲ ತಪ್ಪು ಮಾಹಿತಿ ಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಯೋಗಿಗೆ ಬೇರೆ ಯಾವುದೇ ಡ್ರಗ್ಸ್ ಅಭ್ಯಾಸವಿಲ್ಲ. ಖುಷಿಯಾದ ಸಂದರ್ಭದಲ್ಲಿ ಡ್ರಿಂಕ್ಸ್ ಮಾಡ್ತಾನೆ, ಸಿಗರೇಟ್ ಸೇದುತ್ತಾನೆ ಅಷ್ಟೇ. ಪೊಲೀಸರು ಸಂಶಯ ಪಡುವ ರೀತಿಯಲ್ಲಿ ಯಾವುದೇ ಘಟನೆ ನಡೆದಿಲ್ಲ. ವಿಚಾರಣೆಯನ್ನು ಯಶಸ್ವಿಯಾಗಿ ಎದುರಿಸಿದ್ದು, ಈಗ ಬಂಧನವಾಗಿರುವ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ. ಸದ್ಯ ವಿಚಾರಣೆ ವೇಳೆ ಆತ ಎಲ್ಲಿ ಶೂಟಿಂಗ್ ಮಾಡಿದ್ದರು. ಯಾವ ಯಾವ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಪಡೆದುಕೊಂಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಯೋಗಿ ಡಿಪ್ರೇಷನ್ಗೆ ಹೋಗಿದ್ದೆ ಎಂದು ಹೇಳಲು ಆತನ ಸಿನಿಮಾ ಸೋಲುಗಳೇ ಕಾರಣ. ಏಕೆಂದರೆ ಆತನ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಹಲವು ಸಮಸ್ಯೆ ಎದುರಾದ್ದವು. ಆ ಬಳಿಕ ಕೆಲ ಸಮಯ ವಿರಾಮ ಪಡೆದಿದ್ದ ಕಾರಣ ಹಾಗೇ ಹೇಳಿರಬಹುದು. ಹಲವು ಸಿನಿಮಾಗಳಲ್ಲಿ ಶೂಟಿಂಗ್ ಮಾಡಿದ್ದರೂ ಹಣ ನೀಡಿರಲಿಲ್ಲ. ಇದು ಯೋಗಿಗೆ ಹೆಚ್ಚು ಬೇಸರ ಮಾಡಿತ್ತು. ಈಗ ಆತ ಉತ್ತಮ ಕಥೆ ಆಯ್ಕೆ ಮಾಡಿಕೊಂಡು ಮತ್ತೆ ಕನ್ನಡದ ಅಭಿಮಾನಿಗಳ ಮುಂದೇ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.