ಬೆಂಗಳೂರು: ಸ್ಯಾಂಡಲ್ವುಡ್ ನಟಿ ಹರಿಪ್ರಯಾ ಅವರಿಗೆ ಶ್ರೇಷ್ಠನಟಿ ಪ್ರಶಸ್ತಿ ಸಿಕ್ಕಿದೆ.
ಕನ್ನಡದ ಮತ್ತೊಂದು ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಅಮೃತಮತಿ ಚಿತ್ರ ಈ ಮೊದಲು ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ವಿದೇಶಿ ಭಾಷೆಯ ಚಿತ್ರವೆಂಬ ಪ್ರಶಸ್ತಿ ಗಳಿಸಿತ್ತು. ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರರಿಗೆ ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ಲಭಿಸಿತ್ತು. ಈಗ ಈ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿ ಸಿಕ್ಕಂತಾಗಿದೆ. ಇಲ್ಲಿವರಗೆ ಈ ಚಿತ್ರವು ಹತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿರೋದು ವಿಶೇಷವಾಗಿದೆ. ಈ ಮೂಲಕವಾಗಿ ನಟಿ ಹರಿಪ್ರಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಕನ್ನಡದ ಪ್ರಾಚೀನ ಕೃತಿಯಾದ ಯಶೋಧರ ಚರಿತೆಯ ಪ್ರಸಂಗವನ್ನು ಆಧರಿಸಿ ಅಮೃತಮತಿ ಚಿತ್ರ ಸಿದ್ಧವಾಗಿದೆ. ಬರಗೂರು ಅವರ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಸಂಕಲನಕಾರರಾಗಿ ಸುರೇಶ ಅರಸು, ಛಾಯಾಗ್ರಾಹಕರಾಗಿ ನಾಗರಾಜ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತಾ ಮಲ್ನಾಡ್ ಕಾರ್ಯ ನಿರ್ವಹಿಸಿದ್ದಾರೆ. ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ. ಸುಂದರರಾಜ್, ಪ್ರಮೀಳಾ ಜೋಷಾಯ್ ತಿಲಕ್, ಸುಪ್ರಿಯಾರಾವ್, ವತ್ಸಲಾಮೋಹನ್, ಅಂಬರೀಷ್ ಸಾರಂಗಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಶೀಘ್ರವೇ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವರ ಪತ್ನಿಯ ಬರ್ಬರ ಹತ್ಯೆ
ನಟಿ ಹರಿಪ್ರಿಯಾ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ಹರಿಪ್ರಿಯಾ ನಾಯಕಿ. ಬೆಲ್ ಬಾಟಂ 2 ಸೇರಿ 7-8 ಪ್ರಾಜೆಕ್ಟ್ ಗಳಲ್ಲಿ ಅವರು ಬ್ಯುಸಿ ಇದ್ದಾರೆ. ಕೊರೊನಾ ಕಾರಣದಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿದ್ದವು. ಈಗ ಕೊರೊನಾ ಕಡಿಮೆ ಆಗಿದ್ದು, ಹರಿಪ್ರಿಯಾ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ.