ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸ್ಟಾರ್ ನಟರ ಜೊತೆ ಮಿಂಚಿದ್ದ ನಟಿ ಮಹಾಲಕ್ಷ್ಮಿ ಇದೀಗ ಮತ್ತೆ ಚಂದನವನಕ್ಕೆ ‘ರಾಮ’ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿ ಕನ್ನಡ ಸಿನಿಪ್ರಿಯರನ್ನು ರಂಜಿಸಲು ಸಿದ್ಧರಾಗಿದ್ದಾರೆ.
ಈ ಕುರಿತಂತೆ ನಮ್ಮ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲಿಗೆ ಬೆಂಗಳೂರು ಯಾವಾಗಲೂ ತಂಪಾದ ವಾತಾವರಣದಿಂದ ಕೂಡಿರುತ್ತದೆ. ನನಗೆ ಬೆಂಗಳೂರು ಎಂದರೆ ಬಹಳ ಇಷ್ಟ ಎಂದು ಹೇಳಿದರು. ರಾಮ ಸಿನಿಮಾದಲ್ಲಿ ನಾನು ತಾಯಿ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದು, ಇದೊಂದು ಭಾವಾನಾತ್ಮಕ ಕಥೆ ಒಳಗೊಂಡುವ ಸಿನಿಮಾವಾಗಿದೆ. ಚಿತ್ರದ ಕಥೆ ಚೆನ್ನಾಗಿರುವುದರಿಂದ ಅಭಿನಯಿಸಲು ಒಪ್ಪಿಕೊಂಡೆ. ಮತ್ತೆ ನಿಮ್ಮ ಮಹಾಲಕ್ಷ್ಮಿಯನ್ನು ಈ ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ನೋಡಬಹುದು. ಹಿಂದೆ ನಿಮ್ಮೆಲ್ಲರ ಸಹಕಾರದಿಂದ ಕನ್ನಡ ಚಿತ್ರರಂಗದಲ್ಲಿ ನಾನು ಮಿಂಚಿದ್ದೆ. ಹಾಗೆಯೇ ರಾಮ ಸಿನಿಮಾಕ್ಕೂ ನಿಮ್ಮೆಲ್ಲರ ಸಹಕಾರ ನನಗೆ ಮತ್ತು ರಾಮ ಚಿತ್ರ ತಂಡಕ್ಕೆ ಬಹಳ ಮುಖ್ಯ. ಸಿನಿಮಾ ನೋಡಿ ನಮಗೆ ಬೆಂಬಲ ನೀಡಿ ಎಂದು ಹೇಳಿದರು.
ನಂತರ ಸ್ಯಾಂಡಲ್ವುಡ್ನಿಂದ 30 ವರ್ಷಗಳ ಅಂತರ ಕುರಿತಂತೆ ಕೇಳಿದ ಪ್ರಶ್ನೆಗೆ, ಇದು ನಮ್ಮ ಜೀವನದ ಒಂದು ಭಾಗ, ಕೆಲವು ವರ್ಷ ನಾನು ಕೆಲಸ ಮಾಡಿದೆ ಬಳಿಕ ಕೌಟುಂಬಿಕ ಜೀವನಕ್ಕೆ ಕಾಲಿಟ್ಟೆ, ಇದೀಗ ಕೆಲವು ವರ್ಷಗಳ ಬಳಿಕ ನನಗೆ ಕೊಂಚ ಬಿಡುವು ಸಿಕ್ಕಿದೆ ಹಾಗಾಗಿ ಮತ್ತೆ ನಾನು ಬಣ್ಣ ಹಚ್ಚಲು ತೀರ್ಮಾನಿಸಿದ್ದೇನೆ ಎಂದರು.
ನಾನು ಅಭಿನಯಿಸಿದ ಹಳೆಯ ಸಿನಿಮಾಗಳ ನೆನಪುಗಳು ನನಗೆ ಹಚ್ಚ ಹಸಿರಾಗಿಯೇ ಉಳಿದಿದೆ. ಕನ್ನಡ ಸಿನಿಮಾರಂಗದಲ್ಲಿ ನಟಿಯಾಗಿ ಅಭಿನಯಿಸಿದ್ದು ನನಗೆ ಬಹಳ ಖುಷಿ ತಂದಿದೆ. ನಾನು ನಟಿಸಿದ್ದ ಹಲವು ಸಿನಿಮಾಗಳು ಯಶಸ್ವಿಯಾಗಿದೆ. ಅದೇ ರೀತಿಯ ಹೆಸರು ಮತ್ತು ಖ್ಯಾತಿ ಗಳಿಸುವ ಇಚ್ಛೆಯಿಂದ 30 ವರ್ಷಗಳ ನಂತರ ಮತ್ತೆ ಕಮ್ಬ್ಯಾಕ್ ಮಾಡುತ್ತಿದ್ದೇನೆ. 30 ವರ್ಷಗಳ ನಂತರವೂ ಈ ಮಹಾಲಕ್ಷ್ಮಿಯನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ ಎಂಬುವುದು ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಸ್ಯಾಂಡಲ್ವುಡ್ನಲ್ಲಿ ಆದ ಕೆಲವು ಬದಲಾವಣೆ ಕುರಿತಂತೆ ಮಾತನಾಡಿದ ಅವರು, ಕನ್ನಡದ ಹಿರಿಯ ನಟರೊಂದಿಗೆ ನಾನು ಅಭಿನಯಿಸಿದ್ದೇನೆ. ಅವರಲ್ಲಿ ಕೆಲವರು ಪ್ರಸ್ತುತ ನಮ್ಮೊಟ್ಟಿಗೆ ಇಲ್ಲ. ನಾನು ಅವರನೆಲ್ಲಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅವರೆಲ್ಲರ ನೆನಪುಗಳ ಸದಾ ನನ್ನ ಹೃದಯದಲ್ಲಿ ಹಚ್ಚಹಸಿರಾಗಿದೆ. ಅವರೆಲ್ಲಾ ಕ್ಯಾಮೆರಾ ಮುಂದೆ ಮಾತ್ರವಲ್ಲಾ, ಕ್ಯಾಮೆರಾ ಹಿಂದೆ ಕೂಡ ಉತ್ತಮ ಸಹದ್ಯೋಗಿಗಳಾಗಿದ್ದರು. ನನ್ನ ವೃತ್ತಿ ಜೀವದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ನನಗೆ ಎಲ್ಲರೂ ಸಹಕಾರ ನೀಡಿದ್ದರು. ಅವರೆಲ್ಲರೊಂದಿಗೆ ಒಟ್ಟಾಗಿ ಕೆಲಸ ಕ್ಷಣಗಳು ನನಗೆ ಅದ್ಭುತ ಅನುಭವ ತಂದಿದೆ ಎಂದು ತಿಳಿಸಿದರು.