– ಪ್ರಕರಣದ ಆರು ಮಂದಿ ಅರೆಸ್ಟ್
ರಾಯಚೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಇಬ್ಬರು ಕೊಲೆ ಆರೋಪಿಗಳ ಮೇಲೆ ರಾಯಚೂರು ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ನಡುರಸ್ತೆಯಲ್ಲಿ ನಗರಸಭೆ ಸದಸ್ಯನ ಭೀಕರ ಕೊಲೆ
ಸೋಮವಾರ ರಾತ್ರಿ 9 ಗಂಟೆಗೆ ರಾಯಚೂರಿನ ಜಾಕೀರ್ ಹುಸೇನ್ ವೃತ್ತದಲ್ಲಿ ನಗರಸಭೆ ಜೆಡಿಎಸ್ ಸದಸ್ಯ ಮಕ್ಬೂಲ್ ಕೊಲೆ ಮಾಡಲಾಗಿತ್ತು. ಇದೀಗ ಪ್ರಕರಣದ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಜ್ಜು ಅಲಿಯಾಸ್ ಅಜಮುದ್ದೀನ್, ರಿಯಾಜ್, ಮೊಹಮದ್ ಯಾಸಿನ್, ಅಪಸರ್, ಕಾಶಿನಾಥ್ ಮತ್ತು ನಗರಸಭೆ ಮಾಜಿ ಸದಸ್ಯ ಗೋರಾ ಮಾಸುಂ ಎಂದು ಗುರುತಿಸಲಾಗಿದೆ.
ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನ ವಶಪಡಿಸಿಕೊಳ್ಳುವ ವೇಳೆ ಅಜ್ಜು ಅಲಿಯಾಸ್ ಅಜಮುದ್ದೀನ್ ಮತ್ತು ರಿಯಾಜ್ ಅದೇ ಆಯುಧಗಳಿಂದ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಈ ಘಟನೆಯಲ್ಲಿ ಪೊಲೀಸ್ ಪೇದೆಗಳಾದ ಯಲ್ಲಪ್ಪ, ಚಂದ್ರಕಾಂತ್ಗೆ ಗಾಯಗಳಾಗಿದ್ದು, ಗಾಯಾಳುಗಳನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ, ಕೊಲೆ ಬೆದರಿಕೆ ಸೇರಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ನಗರಸಭೆ ಮಾಜಿ ಸದಸ್ಯ ಗೋರಾ ಮಾಸುಂ ಪ್ರಮುಖ ಆರೋಪಿಯಾಗಿದ್ದಾನೆ. ರಿಯಾಜ್ ಹಾಗೂ ಅಜ್ಜು ಸಹ ರೌಡಿಶೀಟರ್ಗಳಾಗಿದ್ದು, ಹಲವಾರು ಪ್ರಕರಣಗಳನ್ನ ಎದುರಿಸುತ್ತಿದ್ದಾರೆ. ಮೊಹಮದ್ ಯಾಸಿನ್, ಅಪಸರ್ ಹಾಗೂ ಕಾಶಿನಾಥ್ ಸೇರಿ ಒಟ್ಟು ಆರು ಜನ ಆರೋಪಿಗಳು ಸೆರೆ ಸಿಕ್ಕಿದ್ದಾರೆ.
ಏಳು ತಿಂಗಳ ಹಿಂದೆ ನಗರಸಭೆ ಸದಸ್ಯ ಮಕ್ಬೂಲ್ ಸಹೋದರನ ಕೊಲೆಯಾಗಿತ್ತು. ಆ ಪ್ರಕರಣದಲ್ಲಿ ಗೋರಾ ಮಾಸುಂ ಬಂಧನವಾಗಿರಲಿಲ್ಲ. ಹೀಗಾಗಿ ಗೋರಾ ಮಾಸುಂ ಪ್ರಮುಖ ಆರೋಪಿ ಅವನನ್ನ ಬಂಧಿಸುವಂತೆ ಮಕ್ಬೂಲ್ ಓಡಾಡುತ್ತಿದ್ದ. ಇದೇ ದ್ವೇಷಕ್ಕೆ ಈ ಆರು ಜನ ಮಕ್ಬೂಲ್ನನ್ನ ಕೊಲೆ ಮಾಡಿದ್ದಾರೆ. ಅಲ್ಲದೇ ಹಳೆ ವೈಷಮ್ಯ ಸಹ ಕೊಲೆ ಕಾರಣವಾಗಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ತಿಳಿಸಿದ್ದಾರೆ.