ಹಾಸನ: ಮೀಸಲಾತಿ ಸಂಬಂಧ ವಿವಾದಕ್ಕೆ ಒಳಗಾಗಿದ್ದ ಹಾಸನ ಮತ್ತು ಅರಸೀಕೆರೆ ನಗರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯೂ ಸೇರಿದಂತೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿ, ಚುನಾವಣೆಗಳನ್ನು 2 ವಾರಗಳ ಕಾಲ ಮುಂದೂಡಿದೆ.
2 ವಾರಗಳ ಅವಧಿಯೊಳಗೆ ಸ್ಥಾನ ಮೀಸಲಾತಿ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕೆಂದೂ ಕೋರ್ಟ್ ನಿರ್ದೇಶನ ನೀಡಿದೆ. ಕೋರ್ಟ್ ಆದೇಶ ಹೊರಬೀಳುತ್ತಿದಂತೆ ಹಾಸನ ಮತ್ತು ಅರಸೀಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.
ಹಾಸನ ಹಾಗೂ ಅರಸೀಕೆರೆ ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರು ಚುನಾವಣೆಗಳು ಕ್ರಮವಾಗಿ ಅ.16ರ ಶುಕ್ರವಾರ ಮತ್ತು ಅ.22 ಗುರುವಾರದಂದು ನಿಗದಿಯಾಗಿತ್ತು. ಆದರೆ ಈ ಪ್ರಕ್ರಿಯೆಗಳು ತಾತ್ಕಾಲಿಕವಾಗಿ 2 ವಾರಗಳ ಕಾಲ ಮುಂದೂಡಲ್ಪಟ್ಟಿವೆ. ಈ ಅವಧಿಯಲ್ಲಿ ಹಾಲಿ ನಿಗದಿತ ಮಿಸಲಾತಿಯ ಪುನರ್ ಪರಿಶೀಲನೆ ನಡೆಯಬೇಕೆಂದೂ ಹೈಕೋರ್ಟ್ ನಿರ್ದೇಶಿಸಿದೆ. ಜೆಡಿಎಸ್ಗೆ ಅರಸೀಕರೆ ನಗರಸಭೆಯಲ್ಲಿ ಬಹುಮತವಿದ್ದರೂ ಮತ್ತು ಹಾಸನ ನಗರಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದರೂ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುತ್ತಿತ್ತು. ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನ ಮೀಸಲಾತಿಯಲ್ಲಿ ನಿಯಮಾವಳಿಗಳನ್ನು ಹಾಲಿ ಬಿಜೆಪಿ ಸರ್ಕಾರ ಉಲ್ಲಂಘಿಸಿದ್ದು, ಅಕ್ರಮ ಹಾಗೂ ಅನ್ಯಾಯ ಎಸಗಲಾಗಿದೆ ಎಂದು ಆಕ್ಷೇಪಿಸಿ ಉಭಯ ನಗರಸಭೆಗಳ ಜೆಡಿಎಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹಾಸನ ಮತ್ತು ಅರಸೀಕೆರೆ ನಗರಸಭೆಗಳ ಅಧ್ಯಕ್ಷರ ಸ್ಥಾನಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು.
ಜೆಡಿಎಸ್ ವಿಜಯೋತ್ಸವ: ಅರಸೀಕೆರೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿ, 2 ವಾರ ಮುಂದೂಡಿದ ಸುದ್ದಿ ತಿಳಿದ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ನಗರದ ಪಿ.ಪಿ.ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಮಾಡಿದರು. ಜೆಡಿಎಸ್ ಬಹುಮತ ಹೊಂದಿರುವ ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದ್ದು ಅಕ್ರಮ ಹಾಗೂ ಅನ್ಯಾಯ ಎಂದು ಆರೋಪಿಸಿ ಜೆಡಿಎಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.