ಬೆಂಗಳೂರು: ನೆರೆ ರಾಜ್ಯವಾದ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿ, ಲಾಕ್ಡೌನ್ ಘೋಷಣೆಯಾಗಿದೆ. ರಾಜ್ಯದ ಕೋವಿಡ್ ಪ್ರಕರಣಗಳಲ್ಲಿಯೂ ನಿಧಾನವಾಗಿ ಏರಿಕೆ ಕಂಡುಬರುತ್ತಿದ್ದು, ಬೆಂಗಳೂರಿನ ಕೋವಿಡ್ ಪ್ರಕರಣಗಳಲ್ಲಿಯೂ ಟ್ರಾವೆಲ್ ಹಿಸ್ಟರಿಯಿಂದ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ಜೊತೆಗೆ ಮೂರನೇ ಅಲೆ ಆರಂಭದ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ಕಟ್ಟುನಿಟ್ಟಾಗಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ. ಈ ಬಗ್ಗೆ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ, ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದು, ಪ್ರಕರಣ ಹೆಚ್ಚಳದ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು, ಮೈಕ್ರೋಕಂಟೈನ್ ಮೆಂಟ್ ಮಾಡಬೇಕು, ನಿಗದಿತ ಗುಂಪುಗಳಿಗೆ ವ್ಯಾಕ್ಸಿನೇಷನ್ ಹೆಚ್ಚಿಸಬೇಕು, ಗಡಿ ಭಾಗಗಳಲ್ಲಿಯೂ ಎಚ್ಚರಿಕೆಯಿಂದ ನಿಗಾವಹಿಸಬೇಕೆಂದು ತಿಳಿಸಿದ್ದಾರೆ.
ಪೂರ್ವ, ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಹೆಚ್ಚು ಕೋವಿಡ್
ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ಮಾತನಾಡಿ, ನಗರದ ಅಲ್ಲಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಕ್ಲಸ್ಟರ್ ಗಳನ್ನು ಹತ್ತು ಪ್ರಕರಣದಿಂದ ಮೂರಕ್ಕೆ ಇಳಿಸಿ, ಮೈಕ್ರೋಕಂಟೈನ್ ಮೆಂಟ್ ಮಾಡಲಾಗ್ತಿದೆ. ನೂರು ಜಾಗಗಳಲ್ಲಿ ಕ್ಲಸ್ಟರ್ಸ್ ಕಂಡುಬಂದಿದೆ. ಅದರಲ್ಲೂ ನೂರು ಮೀಟರ್ ಒಳಗೆ ಹೆಚ್ಚು ಕ್ಲಸ್ಟರ್ ಗಳು ಕಂಡುಬಂದಿವೆ. ಪೂರ್ವ ವಲಯ, ಬೊಮ್ಮನಹಳ್ಳಿ, ಮಹದೇವಪುರದಲ್ಲಿ ಹಚ್ಚು ಕೋವಿಡ್ ಕಂಡುಬಂದಿದೆ. ಅಪಾರ್ಟ್ ಮೆಂಟ್ ಹಾಗೂ ಮನೆಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಪ್ರತೀ ಕೋವಿಡ್ ಸೋಂಕಿತರ 20-30 ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡಲಾಗ್ತಿದೆ. ಆದರೆ ಸಂಪರ್ಕಿತರಲ್ಲೂ ಕೋವಿಡ್ ಪಾಸಿಟಿವ್ ಕಂಡುಬರುತ್ತಿದೆ. ಟಾರ್ಗೆಟ್ ಟೆಸ್ಟಿಂಗ್ ಮಾಡುವುದರಿಂದ ಕೋವಿಡ್ ಸಂಖ್ಯೆಗಳು ಹೆಚ್ಚು ಕಂಡುಬರುತ್ತಿವೆ ಎಂದರು.
ನಗರದ ಪ್ರತೀ ವಲಯಗಳಿಗೂ ಎಚ್ಚರಿಕೆ ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಹೊರರಾಜ್ಯದಿಂದ ಪ್ರಯಾಣ ಮಾಡಿರುವ ಹಿನ್ನೆಲೆ, ಪ್ರವಾಸ ಹೋಗಿ ಬಂದಿರೋದು ಕಂಡುಬರುತ್ತಿದೆ. ತಜ್ಞರ ಸಭೆಯಲ್ಲೂ ಈ ಬಗ್ಗೆ ಮಾಹಿತಿ ಬಂದಿದ್ದು, ಕೇರಳದಿಂದ ಬಂದಿರುವವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಿಸಲು ಸೂಚಿಸಿದ್ದಾರೆ. ವ್ಯಾಕ್ಸಿನ್ ಪಡೆದಿದ್ದರೂ, ಯಾವುದೇ ವಿನಾಯಿತಿ ನೀಡದೆ ಕೇರಳ, ಮಹಾರಾಷ್ಟ್ರ ಪ್ರಯಾಣಿಕರಿಗೆ ಹೆಚ್ಚು ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ ಎಂದರು. ವ್ಯಾಕ್ಸಿನ್ ಅಭಾವ ಪಾಲಿಕೆ ಕೈಯಲ್ಲಿಲ್ಲ. ರಾಜ್ಯದಿಂದ ಎರಡು ದಿನಕ್ಕೊಮ್ಮೆ, 30-50 ಸಾವಿರ ಡೋಸ್ ಮಾತ್ರ ಬರುತ್ತಿದೆ ಎಂದರು.
ಆಗಸ್ಟ್ 10 ರಿಂದಲೇ ಮೂರನೇ ಅಲೆಯ ನಿರೀಕ್ಷೆ:
ಮೂರನೇ ಅಲೆಯ ಆರಂಭವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಎರಡನೇ ಅಲೆ ಹತ್ತು ದಿನದಲ್ಲೇ 5 ಸಾವಿರ ಪ್ರಕರಕ್ಕೆ ಏರಿಕೆಯಾಗಿತ್ತು. ಆಗಸ್ಟ್ 10 ರಿಂದಲೇ ಈ ನಿರೀಕ್ಷೆ ಇದ್ದು, ಹಾಸಿಗೆಗಳು, ಮಕ್ಕಳ ತಜ್ಞ ವೈದ್ಯರ ಸಿದ್ಧತೆ ಮಾಡಲಾಗ್ತಿದೆ. ಕಂಟೈನ್ ಮೆಂಟ್ ಕೂಡಾ ಹೆಚ್ಚು ಮಾಡಲಾಗ್ತಿದೆ ಎಂದರು.
ಮಕ್ಕಳಿಗೆ ಶಾಲಾರಂಭಕ್ಕೆ ಅವಸರ ಬೇಡ
ಪಾಲಿಕೆ ವ್ಯಾಪ್ತಿಯಲ್ಲಿ ತಕ್ಷಣವೇ ಶಾಲೆಗಳನ್ನು ಆರಂಭ ಮಾಡಲು ಬದಲು, ಸ್ವಲ್ಪ ಕಾದುನೋಡಬೇಕಾಗಿದೆ. ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗುವುದಿಲ್ಲ, ಆದರೆ ಹೆಚ್ಚಾಗುವ ಸಂಕೇತಗಳು ಕಂಡುಬರುತ್ತಿವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇರಳದಲ್ಲಿ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೋವಿಡ್ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. ಕೇರಳ ಗಡಿಭಾಗದ ರಾಜ್ಯದ ಜಿಲ್ಲೆಗಳಲ್ಲಿ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದರು. ನಗರದ ಅತ್ತಿಬೆಲೆ, ಹೊಸೂರು ಚೆಕ್ ಪೋಸ್ಟ್ ಗಡಿಭಾಗದಲ್ಲಿ ನಿಗಾವಹಿಸಲಾಗ್ತಿದೆ. ಕೇರಳದ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ತಮಿಳುನಾಡು ಬಾರ್ಡರ್ ನಿಂದ ಉದ್ಯೋಗಕ್ಕಾಗಿ ನಗರಕ್ಕೆ ಬಹಳಷ್ಟು ಜನ ಬರುತ್ತಿದ್ದು, ಅವರ ಮೇಲೂ ನಿಗಾ ವಹಿಸಲು ಕಂಪನಿಗಳು, ಗಾರ್ಮೆಂಟ್ಸ್ ಗಳಿಗೆ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಬಿಡಿಗಾಸಿನ ಪರಿಹಾರ – 2 ವರ್ಷದ ಹಿಂದೆ 10 ಸಾವಿರ, ಈಗ ಕೇವಲ 3,800 ರೂ.