ಯಾದಗಿರಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ನಿರ್ಧಾರ ಕೈಗೊಂಡಿರುವ ಯಾದಗಿರಿ ಜಿಲ್ಲಾಡಳಿತ ನಕಲಿ ವೈದ್ಯರ ವಿರುದ್ಧ ಸಮರಸಾರಿದ್ದು, ಆರ್ಎಂಪಿ (ಗ್ರಾಮೀಣ ವೈದ್ಯಕೀಯ ವೈದ್ಯರು) ವೈದ್ಯರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.
ಕೊರೊನಾ ಎರಡನೇ ಅಲೆ ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದಕ್ಕೆ ಪರೋಕ್ಷವಾಗಿ ನಕಲಿ ವೈದ್ಯರ ಹಾವಳಿ ಕಾರಣವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನ ಮತ್ತು ಗ್ರಾಮಗಳ ಜನ ನಕಲಿ ವೈದ್ಯರನ್ನು ನೆಚ್ಚಿಕೊಂಡಿದ್ದಾರೆ. ಬಂಡವಾಳ ಮಾಡಿಕೊಂಡಿರುವ ನಕಲಿ ವೈದ್ಯರು ಜನರಿಗೆ ಕೊರೊನಾ ಇದ್ದರೂ, ಅದನ್ನು ಅವರಿಗೆ ತಿಳಿಸದೆ ಸಾಮಾನ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಜನರಿಗೆ ಆರೋಗ್ಯ ತೀರಾ ಆರೋಗ್ಯ ಹದಗೆಟ್ಟಾಗ, ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ.
ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೆಂಡಾಮಂಡಲವಾಗಿ ಡಿಸಿ ರಾಗಪ್ರಿಯ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶಿಲ್ದಾರ ಚನ್ನಮಲ್ಲಪ್ಪ, ಜನಗನಾಥ್ ರೆಡ್ಡಿ ಸೇರಿದಂತೆ ವಿವಿಧ ಅಧಿಕಾರಿಗಳು ನಕಲಿ ಕ್ಲಿನಿಕ್ ಮೇಲೆ ದಾಳಿ ಮಾಡಿ, ವೈದ್ಯರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.