ಧಾರವಾಡ ಅಪಘಾತ ಪ್ರಕರಣ- ಶವ ಅದಲು ಬದಲು, ನಾಯಿಮರಿ ಟ್ಯಾಟೂದಿಂದ ಗುರುತು ಪತ್ತೆ

Public TV
1 Min Read
dwd accident 1

ಹುಬ್ಬಳ್ಳಿ: ಧಾರವಾಡದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದ ಅಪಘಾತದಲ್ಲಿ 11 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಕೆಲವರ ಶವ ಗುರುತು ಪತ್ತೆ ಸವಾಲಾಗಿದೆ. ಶವ ಅದಲು ಬದಲಾಗಿದ್ದು, ನಾಯಿಮರಿ ಟ್ಯಾಟೂದಿಂದ ಮಹಿಳೆಯೊಬ್ಬರ ಗುರುತು ಪತ್ತೆ ಮಾಡಲಾಗಿದೆ.

ಕೆಲವರು ಪ್ರೀತಿಗಾಗಿ, ಇನ್ನೂ ಕೆಲವರು ಫ್ಯಾಶನ್ ಗಾಗಿ ದೇಹದಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇದೀಗ ಕೈಗೆ ಹಾಕಿಸಿಕೊಂಡಿದ್ದ ಟ್ಯಾಟೂದಿಂದ ಶವದ ಗುರುತು ಪತ್ತೆ ಮಾಡಲಾಗಿದೆ.

dwd accident 2

ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ಇಂದು ನಡೆದ ಭೀಕರ ಅಪಘಾತದಲ್ಲಿ 11 ಜನ ಮೃತಪಟ್ಟಿದ್ದಾರೆ. ಮೃತರ ಶವ ಪರೀಕ್ಷೆ ನಂತರ ಶವಗಳು ಅದಲು ಬದಲಾಗಿದ್ದವು. ಹೀಗಾಗಿ ದೇಹಗಳನ್ನು ಗುರುತಿಸುವುದು ಕಷ್ಟವಾಗಿತ್ತು. ಬೇರೆಯವರ ಶವವನ್ನ ಇನ್ನೊಬ್ಬರು ತಗೆದುಕೊಂಡು ಹೋಗುವ ವೇಳೆ ಕೈಗೆ ಹಾಕಿಸಿಕೊಂಡ ನಾಯಿಮರಿ ಟ್ಯಾಟೂದಿಂದ ಶವ ಗುರುತಿಸಲಾಗಿದೆ.

dwd accident 5

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಂತರ ಅಸ್ಮಿತಾ ಅವರ ಶವವನ್ನು ಪರಂಜ್ಯೋತಿ ಕುಟುಂಬದವರು ತೆಗೆದುಕೊಂಡು ಹೋಗಿದ್ದರು. ಆದರೆ ಅಸ್ಮಿತಾಳ ಕುಟುಂಬದವರು ಅವಳ ಕೈ ಮೇಲೆ ಟ್ಯಾಟೂ ಇಲ್ಲದಿರುವುದನ್ನು ನೋಡಿ ಇದು ನಮ್ಮ ಅಸ್ಮಿತಾ ಅಲ್ಲ ಎಂದು ಹೇಳಿದ್ದಾರೆ. ಕೂಡಲೇ ಶವವನ್ನ ತೆಗೆದುಕೊಂಡು ಹೋಗುತ್ತಿದ್ದ ಪರಂಜ್ಯೋತಿ ಕಡೆಯವರಿಗೆ ಕರೆ ಮಾಡಿ ವಿಚಾರಿಸಿದಾಗ ಆಕೆಯ ಕೈ ಮೇಲೆ ನಾಯಿಮರಿ ಟ್ಯಾಟೂ ಇರುವುದು ಪತ್ತೆಯಾಗಿದೆ.

HUBLI KIMS

ಮುಗಿಲು ಮುಟ್ಟಿದ ಆಕ್ರಂದನದ ಮಧ್ಯೆ ನಾಯಿಮರಿ ಟ್ಯಾಟೂ ಹಾಕಿಸಿಕೊಂಡ ಅಸ್ಮಿತಾಳ ಶವವನ್ನು ಪರಂಜ್ಯೋತಿ ಕುಟುಂಬದವರಿಂದ ವಾಪಸ್ ಪಡೆದು ಅಂತ್ಯಕ್ರಿಯೆಗೆ ಕೊಂಡೊಯ್ಯಲಾಗಿದೆ. ನಾಯಿಮರಿ ಮೇಲಿದ್ದ ಪ್ರೀತಿಗೆ ಹಾಕಿಸಿಕೊಂಡಿದ್ದ ಟ್ಯಾಟೂ ಕೊನೆಗೆ ಶವ ಪತ್ತೆ ಮಾಡಲು ಸಹಕಾರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *