ಧಾರವಾಡ: ಜಿಲ್ಲೆಯಲ್ಲಿ ಸಂಜೆ ಸುರಿದ ಧಾರಾಕಾರ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ನಗರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತವಾಯಿತು.
ನಗರದ ಹೊರ ವಲಯದಲ್ಲಿ ಧಾರಾಕಾರ ಮಳೆಗೆ ಹೊಲಗಳಲ್ಲಿ ನೀರು ಹರಿದಿದ್ದರಿಂದ ಒಡ್ಡು ಒಡೆದವು. ನಗರದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಯಿತು. ಹಾವೇರಿ ಪೇಟೆಯ ಕಂಠಿ ಓಣಿಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿದ್ದರಿಂದ ಬೈಕ್ ಸವಾರರು ಪರದಾಟ ನಡೆಸಬೇಕಾಯಿತು.
ರೈತರು ಕಳೆದ ಒಂದು ವಾರದಿಂದ ಹೊಲಗಳನ್ನು ಬಿತ್ತನೆಗೆ ಸಿದ್ಧ ಮಾಡಿಕೊಂಡು, ಮಳೆ ಬರುವುದನ್ನು ಕಾಯುತಿದ್ದರು. ಇವತ್ತು ಸುರಿದ ಮಳೆಯಿಂದ ಸಂತಸಗೊಂಡಿರುವ ರೈತರು, ಇನ್ನೆರಡು ದಿನಗಳಲ್ಲಿ ಬಿತ್ತನೆ ಮಾಡಲು ಆರಂಭ ಮಾಡಲಿದ್ದಾರೆ. ಇಗಾಗಲೇ ಬಿತ್ತನೆಗಾಗಿ ಬೀಜ ಹಾಗೂ ಗೊಬ್ಬರ ಖರೀದಿ ಮಾಡಿದ್ದು, ಹೊಲ, ಗದ್ದೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಬಿತ್ತನೆ ಮಾಡಲಿದ್ದಾರೆ.