ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ವಿವಿಧೆಡೆ ಅಪಾರ ಪ್ರಮಾಣ ಬೆಳೆ ಹಾನಿಯೊಂದಿಗೆ ಹಲವೆಡೆ ಮನೆಗಳು ಸಹ ಕುಸಿದು ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಕುಂದಗೋಳ ತಾಲೂಕಿನ ಹಲವು ಗ್ರಾಮಗಳಲ್ಲಿ ಸತತವಾಗಿ ಸುರಿದ ಮಳೆಗೆ 35ಕ್ಕೂ ಅಧಿಕ ಮನೆಗಳು ನೆಲಕಚ್ಚಿವೆ. ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಹಿರೇಹರಕುಣಿ ಗ್ರಾಮದಲ್ಲಿ 35 ಕ್ಕೂ ಹೆಚ್ಚು ಮನೆಗಳ ಗೋಡೆ, ಮಾಳಿಗೆ ಕುಸಿತವಾಗಿವೆ. ಹೀಗಾಗಿ ಮಳೆಯಿಂದ ಕುಂದಗೋಳ ತಾಲೂಕಿನ ಜನರು ಸಂಕಷ್ಟಕ್ಕೆ ಅನುಭವಿಸುವಂತಾಗಿದೆ.
ಕುಂದಗೋಳ, ಕಲಘಟಗಿ ತಾಲೂಕು ಸೇರದಂತೆ ಹುಬ್ಬಳ್ಳಿ ಮಹಾನಗರದಲ್ಲೂ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಹಲವು ಮನೆಗಳು ಭಾಗಶಃ ಜಖಂಗೊಡಿವೆ. ಅಲ್ಲದೆ ಕಳೆದ ವರ್ಷವೂ ಸಹ ಈ ಪ್ರದೇಶಗಳಲ್ಲಿ ಸಾಕಷ್ಟು ಮನೆಗಳು ನೆಲಸಮವಾಗಿದ್ದರೂ ಅನೇಕರಿಗೆ ಪರಿಹಾರ ದೊರೆತಿಲ್ಲ. ಹೀಗಾಗಿ ಕೂಡಲೇ ಜಿಲ್ಲಾಡಳಿತ ಮತ್ತು ಸರ್ಕಾರ ಹಾನಿಗೊಳಗಾದ ಮನೆಗಳ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.