ಹಾಸನ: ಧರ್ಮಸ್ಥಳಕ್ಕೆ ಹೋಗಲು ರಾಜ್ಯದ ಹಲವೆಡೆಯಿಂದ ಹಾಸನಕ್ಕೆ ಬಂದಿರುವ ಭಕ್ತರು ಅನಿವಾರ್ಯವಾಗಿ ಚಿಕ್ಕ ಚಿಕ್ಕ ಖಾಸಗಿ ವಾಹನದಲ್ಲಿ ತುಂಬಾ ರಶ್ನಲ್ಲೇ ಧರ್ಮಸ್ಥಳಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಡೆ ಕಾರ್ತಿಕದ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಹೋಗಲೇಬೇಕು ಎಂದು ನಿರ್ಧರಿಸಿರುವ ಭಕ್ತರು ಸಾರಿಗೆ ಮುಷ್ಕರ ಇದ್ದರೂ ರಾಜ್ಯದ ವಿವಿಧೆಡೆಯಿಂದ ರೈಲಿನಲ್ಲಿ ಹಾಸನಕ್ಕೆ ಬಂದಿದ್ದಾರೆ. ನಂತರ ಹಾಸನದಲ್ಲಿ ಸರಿಯಾದ ಖಾಸಗಿ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ, ದುಬಾರಿ ಬೆಲೆಯನ್ನಾದರೂ ಕೊಟ್ಟು ರಶ್ನಲ್ಲೇ ದರ್ಮಸ್ಥಳಕ್ಕೆ ಹೋಗುತ್ತಿದ್ದಾರೆ.
ಅದರ ಜೊತೆಗೆ ಹಾಸನದಿಂದ ಮೈಸೂರು ಸೇರಿದಂತೆ ವಿವಿಧೆಡೆಗೆ ಹೋಗುವ ಪ್ರಯಾಣಿಕರಿಗೂ ದುಬಾರಿ ಬೆಲೆ ಬಿಸಿ ತಟ್ಟಿದೆ. ಮೈಸೂರಿಗೆ ಹೋಗಲು 120 ರೂಪಾಯಿ ಬಸ್ಚಾರ್ಜ್ ಇದ್ದರೆ ಖಾಸಗಿ ವಾಹನದವರು 500 ರೂಪಾಯಿ ಕೇಳುತ್ತಿದ್ದಾರೆ.
ಡಿ.14ರ ಸೋಮವಾರ ರಾತ್ರಿ ಶ್ರೀಮಂಜುನಾಥ ಸ್ವಾಮಿಗೆ ಲಕ್ಷ ದೀಪೋತ್ಸವದ ವಿಶೇಷ ಪೂಜೆ ನಡೆಯಲಿದೆ. ದೀಪೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳವೂ ಪ್ರತೀ ವರ್ಷದಂತೆ ನಡೆಯಲಿದ್ದು, ಈ ಬಾರಿ ವಸ್ತು ಪ್ರದರ್ಶನವನ್ನು ರದ್ದು ಪಡಿಸಲಾಗಿದೆ. ಉಳಿದಂತೆ ಎಲ್ಲಾ ಕಾರ್ಯಕ್ರಮಗಳೂ ಕೋವಿಡ್ ನಿಯಮದಂತೆ ನಡೆಯಲಿದೆ.
ದೀಪೋತ್ಸವದ ಅಂಗವಾಗಿ ಇಡೀ ಧರ್ಮಸ್ಥಳವೇ ವಿದ್ಯುದೀಪಗಳಿಂದ ಶೃಂಗಾರಗೊಂಡಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ದೇವಸ್ಥಾನ, ಹೆಗ್ಗಡೆಯವರ ಬೀಡಿನ ಮನೆ, ಪ್ರವೇಶ ದ್ವಾರ, ಉದ್ಯಾನ, ವಸತಿ ಛತ್ರಗಳು,ಬಾಹುಬಲಿ ಬೆಟ್ಟ ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.