– ಕಾಫಿ ಡೇ ಸಿದ್ಧಾರ್ಥ್ ನೆನಪಿಸಿಕೊಂಡ ಮಾಜಿ ಸಿಎಂ
ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ಸಾವು ಆತ್ಮಹತ್ಯೆಯಲ್ಲ, ರಾಜಕೀಯ ಕೊಲೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1995 ರಿಂದ ಧರ್ಮೇಗೌಡರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಯವರಾಗಿರಲಿಲ್ಲ, ಆದರೆ ಇಂದು ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಜೀವನದ ಮರೆಯಲಾಗದ ದುರಂತ ದಿನವಾಗಿದೆ. ಇದು ಆತ್ಮಹತ್ಯೆಯಲ್ಲ ರಾಜಕೀಯ ಕೊಲೆ ಎಂದು ಆರೋಪಿಸಿದರು.
ಹಲವಾರು ಸ್ನೇಹಿತರನ್ನು ಕಳೆದ 15 ವರ್ಷದ ರಾಜಕೀಯ ಜೀವನದಲ್ಲಿ ಕಳೆದುಕೊಂಡಿದ್ದೇನೆ. ಆದರೆ ನನ್ನ ಸಹೋದರನ ಸಮಾನರಾದ ಧರ್ಮಣ್ಣನ ಸಾವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಮಾತ್ರವಲ್ಲದೆ ಎಲ್ಲಾ ರಾಜಕಾರಣಿಗಳು ಈ ಘಟನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮೇಗೌಡರ ತಂದೆ ಲಕ್ಷ್ಮಯ್ಯರ ಹೇಳಿಕೊಂಡಿದ್ದರು, ನಾನಂತೂ ಮಂತ್ರಿ ಆಗಲಿಲ್ಲ ನಾನು ಸಾಯುವ ಮುನ್ನ ನನ್ನ ಮಗ ಮಂತ್ರಿ ಆಗಬೇಕು ಎನ್ನುವ ಬಯಕೆ ವ್ಯಕ್ತಪಡಿಸಿದ್ದರು. ಅವರು ಆಸೆ ಪಟ್ಟಂತೆ ರಾಜಕೀಯಕ್ಕೆ ಬಂದ ಅಣ- ತಮ್ಮ ಧರ್ಮೇಗೌಡ ಮತ್ತು ಭೋಜೆ ಗೌಡರು ಕಾಂಗ್ರೆಸ್ಸಿಗೆ ಸೇರಲು ಸಿದ್ಧರಾಗಿದ್ದರು. ನಂತರ ನನ್ನ ಬಳಿ ಬಂದು ಮಾತಾನಾಡಿದರು. ನಾನು ನಮ್ಮ ಪಕ್ಷದಲ್ಲಿ ಎಂಎಲ್ಎ ಸ್ಥಾನ ಕೊಡಿಸುವುದಾಗಿ ತಿಳಿಸಿದ ನಂತರ ನಮ್ಮ ಪಕ್ಷ ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ಅದರಂತೆ ನಾನು ಅವರನ್ನು ವಿಧಾನಪರಿಷತ್ ಉಪಸಭಾಪತಿ ಮಾಡಿದ್ದೆ. ಆದರೆ ಅದೇ ಅವರ ಜೀವ ಹೋಗೋದಕ್ಕೆ ಕಾರಣವಾಯಿತು ಅಂತ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಾವಂತ ಕೃಷಿಕನಾಗಿ, ಪರಿಸರ ಪ್ರೇಮಿಯಾಗಿದ್ದ ಧರ್ಮೇಗೌಡರು ಗಿಡಕ್ಕೆ ಏಟಾದರು ನೊಂದುಕೊಳ್ಳುವಂತ ಮನಸ್ಥಿತಿಯವರು. ಆದರೆ ಇಂದು ರಾಜಕೀಯದ ಒತ್ತಾಸೆಯಿಂದ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತು ಮಾಧ್ಯಮದರೊಂದಿಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ, ಸದನದ ಘಟನೆಯ ಪರಿಣಾಮದಿಂದ ಈ ಘಟನೆ ನಡೆದಿದೆ ಎಂದು ಮತ್ತೊಮ್ಮೆ ಆರೋಪಿಸಿದರು.
ಭೋಜೆ ಗೌಡರು ಕಳೆದ 8-10 ದಿನದ ಹಿಂದೆ ಸಂಪರ್ಕಿಸಿದ್ದರು. ನಮ್ಮಣ್ಣ ಬಹಳ ಧೃತಿಗೆಟ್ಟಿದ್ದಾನೆ, ಜೀವಕ್ಕೆ ಅಪಾಯ ಮಾಡಿಕೊಳ್ಳುತ್ತಾನೆ ಎಂದು ಅನಿಸುತ್ತಿದೆ ಎಂದಿದ್ದರು. ನಾನು ಅರ್ಧಗಂಟೆ ಮಾತಾಡಿ ನಿನ್ನ ತಪ್ಪಿಲ್ಲ ಎಂದಿದ್ದೆ. ದೇವೇಗೌಡರು ಮಾತಾಡಿದ್ದರು, ಕೌನ್ಸಿಲ್ ಸೆಕ್ರೆಟರಿ ಹೆಣ್ಣುಮಗಳು ಮಹಾಲಕ್ಷ್ಮಿ ಸಭಾಪತಿ ನೋಟಿಸ್ ಗೆ ಉತ್ತರ ಕೊಡಲಾಗದೆ, ಒಂದೂವರೆ ಪುಟದ ವರದಿ ಕೊಟ್ಟಿದ್ದಾರೆ. ಅದರಲ್ಲಿ ಧರ್ಮೇಗೌಡರ ವಿರುದ್ಧ ಚಾರ್ಜ್ ಮಾಡಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಈ ಘಟನೆ ಆಗಿರಬಹುದು ಎಂದು ಅನಿಸುತ್ತಿದೆ. ವ್ಯಕ್ತಿಯ ಕೊಲೆಗೆ ರಾಜಕೀಯ ವ್ಯವಸ್ಥೆ ಕಾರಣವಾಗಿದೆ ಎಂದು ಅನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಧರ್ಮೇಗೌಡ ಎಂಬ ಹೆಸರಿನ ಇವರು ನಿಜವಾದ ಧರ್ಮರಾಯರಾಗಿದ್ದರು. ನಿಜವಾದ ಧರ್ಮರಾಯನನ್ನು ಕಳೆದುಕೊಂಡಿದ್ದೇನೆ. ನಾನು ಮಾನ ಮರ್ಯಾದೆ ಇಲ್ಲದೆ ಜೀವನ ಮಾಡುವ ರಾಜಕಾರಣಿಗಳು ನೋಡಿದ್ದೇನೆ. ಅದೇ ರೀತಿ ಇಂತಹ ಸೂಕ್ಷ್ಮ ಜೀವಿಗಳನ್ನು ರಾಜಕೀಯದಲ್ಲಿ ನೋಡಿದ್ದೇನೆ. ಇಂತ ಕೆಟ್ಟ ಕ್ಷಣ ನನ್ನ ಜೀವನದಲ್ಲಿ ಬರುತ್ತೆ ಅಂತ ನಾನು ಯಾವತ್ತೂ ಊಹಿಸಿರಲಿಲ್ಲ. ನಾವೆಲ್ಲಾ ಸೇರಿ ಅವರನ್ನ ಕೊಲೆ ಮಾಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.
ಹಿಂದೆ ಎಸ್.ಎಂ ಕೃಷ್ಣ ಕುಟುಂಬದಲ್ಲಿ ಆತ್ಮಹತ್ಯೆ ನಡೆದಿತ್ತು. ಎರಡು ದಿನದ ಹಿಂದೆ ಸಿದ್ಧಾರ್ಥ್ ಸಾವಿನ ಬಗ್ಗೆ ಆಪ್ತರ ಬಳಿ ಮಾತನಾಡಿದ್ದಾರೆ. ಇವರಿಗೆ ಈಜು ಬರ್ತಿತ್ತು ಅದೆಲ್ಲವನ್ನು ಯೋಚನೆ ಮಾಡಿಯೇ ಹೀಗೆ ತೀರ್ಮಾನ ಮಾಡಿದ್ದಾರೆ. ಅಂತಿಮವಾಗಿ ವಿಧಿ ಈ ರೀತಿ ಇತಿ ಶ್ರೀ ಹಾಡಿದ್ದು ದುರಂತ. ಬ್ಲ್ಯಾಕ್ ಡೇ ಇದು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯಬಾರದು. ಯಾರ ಜೀವನದಲ್ಲೂ ಹೀಗಾಗಬಾರದು. ಈ ವ್ಯವಸ್ಥೆ ಮರುಕಳಿಸದಂತೆ ಘಟನೆಯ ಬಗ್ಗೆ ಸ್ಪಷ್ಟವಾದ ಸತ್ಯ ಹೊರಬರಬೇಕು. ಕಾನೂನಿನ ವಿರುದ್ಧವಾಗಿ ಯಾವತ್ತು ನಿರ್ಧಾರ ಕೈಗೊಂಡಿಲ್ಲ. ಅವರು ಮಗು ಇದ್ದಂತೆ ಮಗುವಿನಂತ ಮನಸ್ಸು ಅವರದ್ದು, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಘಟನೆಯಲ್ಲಿ ಯಾರ್ಯಾರ ಪಾತ್ರ ಇದೆ ಅವರೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಎರೆಡು ಸದನದಲ್ಲಿಯೂ ಇದರ ಸತ್ಯ ಹೊರಬರಬೇಕು. ರಾಜ್ಯದ ರಾಜಕಾರಣದಲ್ಲೇ ಇದು ಕಪ್ಪು ಚುಕ್ಕೆ. ಅವರು ಎಂದಿಗೂ ಹೇಡಿ ಅಲ್ಲ. ಕೆಲವೇ ಕೆಲವು ಮಂದಿಗೆ ಅಂತ ಪಾಪ ಪ್ರಜ್ಞೆ ಕಾಡೋದು. ಅವರು ಮಾಡದ ತಪ್ಪಿಗೆ ಅವರು ಬಲಿಯಾಗಿದ್ದಾರೆ. ಜಾತಿ ವ್ಯವಸ್ಥೆಯ ಬಗ್ಗೆಯೂ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಆ ಸಮಾಜಕ್ಕೆ ನಾನು ಕೇಳುತ್ತೇನೆ. ನನ್ನ ಸ್ವಂತ ಅಣ್ಣ-ತಮ್ಮಂದಿರಿಗಿಂತ ಹೆಚ್ಚಾಗಿದ್ದರು. ಬಾಂಧವ್ಯದ ಬೆಲೆಯನ್ನ ಈ ಕುಟುಂಬ ತೋರಿಸಿದೆ. ಅಣ್ಣ ತಮ್ಮಂದಿರ ಹತ್ತಿರ ನಾನು ಆತ್ಮೀಯನಾಗಿದ್ದೆ ಅಂತ ಕೆಲವರು ನನ್ನ ಮೇಲೆ ಕೋಪಿಸಿಕೊಂಡರು ಎಂದು ಹೆಚ್ಡಿಕೆ ತಿಳಿಸಿದರು.