ಮಂಗಳೂರು: ಕೊರೊನಾ ಎಂಬ ಮಹಾಮಾರಿ ಯಾರನ್ನೂ ಬಿಡುತ್ತಿಲ್ಲ. ಘಟಾನುಘಟಿ ವ್ಯಕ್ತಿಗಳಿಂದ ಹಿಡಿದು ಜನಸಾಮಾನ್ಯರವರೆಗೂ ಸೋಂಕು ಹರಡುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿನ ಯುವ ನಾಯಕ ಮಿಥುನ್ ರೈಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಬಗ್ಗೆ ತಮ್ಮ ಫೇಸ್ಬುಕ್ ನಲ್ಲಿ ಮಿಥುನ್ ರೈಯವರು ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಾನು ಬೆಂಗಳೂರಿನಲ್ಲಿ ಕ್ವಾರಂಟೈನ್ ಆಗಿದ್ದೇನೆ. ಅಲ್ಲದೆ ನಿಮ್ಮ ಸೇವೆ ಮಾಡಲು ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ. ನಿಮ್ಮ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ಕೆಲ ದಿನಗಳಿಂದ ಯಾರೆಲ್ಲ ನನ್ನ ಸಂಪರ್ಕದಲ್ಲಿದ್ರೋ ಅವರೆಲ್ಲ ಆದಷ್ಟು ಬೇಗ ಕೋವಿಡ್ 19 ಟೆಸ್ಟ್ ಮಾಡಿಸಿಕೊಳ್ಳಿ ಎಂದು ಇದೇ ವೇಳೆ ಮನವಿ ಕೂಡ ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಆದಾಗಿನಿಂದಲೂ ಮಿಥುನ್ ರೈ ಅವರು ಜಿಲ್ಲೆಯ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಜಿಲ್ಲೆಯ ನಾನಾ ಕಡೆ ಸುತ್ತಾಡಿ ಅಗತ್ಯ ವಸ್ತುಗಳ ಕಿಟ್ ನ್ನು ಮನೆ ಮನೆಗೆ ತಲುಪಿಸುತ್ತಿದ್ದರು. ಬಳಿಕವೂ ಯಾವುದಾದರೂ ಸಮಸ್ಯೆಗಳು ಗಮನಕ್ಕೆ ಬಂದಾಗ ಕೂಡ ಜನರೊಂದಿಗೆ ಬೆರೆಯುತ್ತಿದ್ದರು. ಹೀಗಾಗಿ ಕಳೆದ ಕೆಲ ದಿನದಿಂದ ಸಂಪರ್ಕದಲ್ಲಿದ್ದವರನ್ನು ಸ್ವಯಂ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸಿದ್ದಾರೆ.