ಬೆಂಗಳೂರು: ದ್ವಿಚಕ್ರ ವಾಹನ ಕದಿಯುತ್ತಿದ್ದ ಅಂತರರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದು, ಐದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ನಗರದ ಹೊರವಲಯದ ಆನೇಕಲ್ ನಲ್ಲಿ ಘಟನೆ ನಡೆದಿದ್ದು, ತಮಿಳುನಾಡಿನ ಪೆನ್ನಪಲ್ಲಿ ಮೂಲದ ಕಿರಣ್ ಬಂಧಿತ ಆರೋಪಿ. ಕಿರಣ್ ಗ್ಯಾಂಗ್ ನ ಉಳಿದ ಇಬ್ಬರು ಆರೋಪಿಗಳಾದ ಸಂದೀಪ್ ಹಾಗೂ ರಾಜೇಶ್ ಪಾರಾರಿಯಾಗಿದ್ದಾರೆ. ಬಂಧಿತನಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಆನೇಕಲ್ ಪೋಲೀಸರು ಬಲೆ ಬೀಸಿದ್ದಾರೆ.
ಕಳ್ಳತನ ಮಾಡುತ್ತಿದ್ದ ಬೈಕ್ ಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಬೈಕ್ ಕಳೆದುಕೊಂಡವರಿಗೆ ಮರಳಿ ತಲುಪಿಸಲು ಎಲ್ಲ ಸಿದ್ಧತೆಗಳನ್ನು ಪೋಲೀಸರು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದು, ಆದಷ್ಟು ಬೇಗ ಆರೋಪಿಗಳನ್ನ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಇತ್ತೀಚಿಗೆ ಆನೇಕಲ್ ಉಪವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಪೋಲೀಸರು ಎಲ್ಲೆಡೆ ಕಳ್ಳರಿಗಾಗಿ ಬೀಸಿದ್ದ ಬಲೆಯಲ್ಲಿ ಇದೀಗ ಒಂದು ಕಳ್ಳರ ಗ್ಯಾಂಗ್ ನ ಒಬ್ಬ ಸಿಕ್ಕಿ ಬಿದ್ದಿದ್ದಾನೆ.