ಹುಬ್ಬಳ್ಳಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕಾರಣ, ಆಲೋಚನೆಗಳು ಈಗ ನಡೆಯುವುದಿಲ್ಲ. ಹೀಗಾಗೇ ಅವರಷ್ಟಕ್ಕೆ ಇರಲು ಹೇಳಿದ್ದೇವೆ. ನಾವು ಮಾಡೋದನ್ನು ಮಾಡುತ್ತೇವೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದರು.
ನಗರದಲ್ಲಿಂದು ಬಿಜೆಪಿ ಜೊತೆಗಿನ ಮೈತ್ರಿ, ದೇವೇಗೌಡರ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಮಾಮೂಲಿಯಾಗಿ ಮೈತ್ರಿ ಆಗುತ್ತೆ. ಈ ಬಾರಿ ಮೈತ್ರಿ ಗಟ್ಟಿಯಾಗಿರುತ್ತೆ. ಇದು ಪಾಲುಗಾರಿಕೆಯ ಮೈತ್ರಿ ಆಗುತ್ತೆ. ಮೈತ್ರಿ ಮುರಿದರೆ ಏನಾಗುತ್ತೆ ಎಂದು ಬಿಜೆಪಿಯವರಿಗೂ ಗೊತ್ತಾಗಿದೆ. ಹೀಗಾಗೇ ನಿಮ್ಮಷ್ಟಕ್ಕೆ ನೀವಿರಿ ಅಂತ ದೇವೇಗೌಡರಿಗೆ ಹೇಳಿದ್ದೇವೆ. ಅವರ ವಿಚಾರ, ಆಲೋಚನೆಗಳು ಈಗ ನಡೆಯಲ್ಲ. ಅವರ ರಾಜಕಾರಣವೇ ಬೇರೆ, ಅವರು ಹೇಳುವುದನ್ನ ಹೇಳುತ್ತಾರೆ. ಕೇಳುವುದು ಬಿಡುವುದು ನಮಗೆ ಬಿಟ್ಟದ್ದು. ನಾವು ಮಾಡೋದನ್ನ ಮಾಡುತ್ತೇವೆ ಎಂದು ಹೊರಟ್ಟಿ ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಸೋಲಿನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ನವರನ್ನು ಕಾಂಗ್ರೆಸ್ನವರೇ ಸೋಲಿಸಿದ್ದಾರೆ. ಇದರಲ್ಲಿ ಜೆಡಿಎಸ್ ಪಾತ್ರ ಇಲ್ಲ ಅನ್ನೋದು ಸ್ಪಷ್ಟವಾಯಿತು. ಅಲ್ಲದೆ ವಿಪಕ್ಷದಲ್ಲಿದ್ದಾಗ ಸೋಲಿಸುವುದೇ ಧರ್ಮ ಎಂದರು.