– ಸರ್ಕಾರದಿಂದ ಅಧಿಕೃತ ಆದೇಶ
ಬೆಂಗಳೂರು: ದೇವಾಲಗಳಲ್ಲಿ ದೈನಂದಿನ ಪೂಜೆ ಹಾಗೂ ಸೇವೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.
ಮುಜರಾಯಿ ಇಲಾಖೆ ಇಂದು ಆದೇಶ ಹೊರಡಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಪೂಜೆ ಹಾಗೂ ಸೇವೆಗಳನ್ನು ನಡೆಸಬಹುದಾಗಿದೆ. ಮಾರ್ಗಸೂಚಿಗಳ ಪಾಲನೆ ಕಡ್ಡಾಯವಾಗಿದೆ. ಉತ್ಸವದ ದಿನಗಳಲ್ಲಿ ಹೋಮ, ಹವನಗಳನ್ನು ಸಾಂಕೇತಿಕವಾಗಿ ನಡೆಸಲು ಅನುಮತಿ ನೀಡಲಾಗಿದ್ದು, ಅರ್ಚಕರು, ತಂತ್ರಿಗಳು, ದೇಗುಲದ ಸಿಬ್ಬಂದಿ ಮಾತ್ರ ಭಾಗವಹಿಸಿ ಸಾಂಕೇತಿಕ ಹೋಮ, ಹವನಗಳನ್ನು ನಡೆಸಬಹುದಾಗಿದೆ.
ಭಕ್ತಾದಿಗಳು, ಜನಸಂದಣಿ ಇಲ್ಲದೇ ಹೋಮ, ಹವನ ನಡೆಸಬೇಕು. ಅಲ್ಲದೆ ಜಾತ್ರಾ ಮಹೋತ್ಸವ, ಬ್ರಹ್ಮ ರಥೋತ್ಸವ, ಪವಿತ್ರೋತ್ಸವಗಳನ್ನು ನಡೆಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಕೊರೋನಾ ಹಾಗೂ ಲಾಕ್ಡೌನ್ ಆದಾಗಿನಿಂದ ದೇವಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.