– ಇನ್ನೊಂದೆಡೆ ಕತ್ತು ಕುಯ್ದುಕೊಂಡ ವ್ಯಕ್ತಿ
– ಇಬ್ಬರ ಆರೋಗ್ಯವೂ ಸ್ಥಿರ
ಲಕ್ನೋ: ಅಚ್ಚರಿಯ ಘಟನೆ ಎಂಬಂತೆ 22 ವರ್ಷದ ಯುವಕನೊಬ್ಬ ದೇವಸ್ಥಾನಕ್ಕೆ ತೆರಳಿ ದೇವರ ಎದುರು ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಅರ್ಪಣೆ ಮಾಡಿದ ಘಟನೆ ಉತ್ತರಪ್ರದೇಶದ ಬಬೇರು ಪ್ರದೇಶದಲ್ಲಿ ನಡೆದಿದೆ.
ಯುವಕನನ್ನು ಆತ್ಮರಾಮ್ ಎಂದು ಗುರುತಿಸಲಾಗಿದೆ. ಈತ ಶನಿವಾರ ದೇವಸ್ಥಾನಕ್ಕೆ ತೆರಳಿದ್ದಾನೆ. ಬಳಿಕ ಅಲ್ಲಿ ದೇವರ ಮುಂದೆಯೇ ತನ್ನ ನಾಲಿಗೆಯನ್ನು ತಾನೇ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾನೆ. ಘಟನೆಯ ಬಳಿಕ ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಯುವಕನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಆತ್ಮರಾಮ್ ತಂದೆ ಮಾತನಾಡಿ, ಮಗ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ನವರಾತ್ರಿ ಉಪವಾಸ ಮಾಡಿದ್ದು, ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ 49 ವರ್ಷದ ವ್ಯಕ್ತಿಯೊಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಿವನಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಉತ್ತರಪ್ರದೇಶದ ಕುರಾರ ಪ್ರದೇಶದಲ್ಲಿ ನಡೆದಿದೆ.
ವ್ಯಕ್ತಿಯನ್ನು ರುಕ್ಮಾನಿ ಮಿಶ್ರಾ ಎಂದು ಗುರುತಿಸಲಾಗಿದ್ದು, ಇವರು ಶನಿವಾರ ರಾತ್ರಿ ಕೋಟೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ತನ್ನ ಕತ್ತಿಗೆಯನ್ನು ಚೂರಿಯಿಂದ ಕೊಯ್ದುಕೊಂಡಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ರುಕ್ಮಾನಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಇವರ ಆರೋಗ್ಯ ಕೂಡ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಎರಡೂ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿರುವುದಾಗಿ ಎಸ್ಪಿ ತಿಳಿಸಿದ್ದಾರೆ.