ಕಲಬುರಗಿ: ದೇವಸ್ಥಾನದ ಒಳಗೆ ನುಗ್ಗಿ ಖದೀಮರು ಹಣದ ಹುಂಡಿಯನ್ನೇ ಹೊತ್ತೊಯ್ದಿರುವ ಘಟನೆ ನಡೆದಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಹಣದ ಹುಂಡಿಯನ್ನು ಖದೀಮರು ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇವಸ್ಥಾನದ ಒಳಗಿದ್ದ ಹಣದ ಹುಂಡಿಯನ್ನು ಕೊರೊನಾ ಹಿನ್ನಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಇಡಲಾಗಿತ್ತು. ಹೀಗಾಗಿ ಹುಂಡಿಯನ್ನು ಹೊರ ತರಲು ಕಳ್ಳರಿಗೆ ಅನುಕೂಲವಾಗಿದ್ದು, ಹೊತ್ತೊಯ್ದಿದ್ದಾರೆ.
ದೇವಸ್ಥಾನದ ಹಿಂಭಾಗಕ್ಕೆ ಹುಂಡಿಯನ್ನ ಹೊತ್ತೊಯ್ದು, ಖದೀಮರು ಹಣ ಕಳ್ಳತನ ಮಾಡಿದ್ದು, ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನಾಧರಿಸಿ ಚಿತ್ತಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.