ಮಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ದೇವಸ್ಥಾನದಲ್ಲಿ ಅದ್ಧೂರಿ ಮದುವೆ ಮಾಡುತ್ತಿದ್ದ ವೇಳೆ ಸಹಾಯಕ ಆಯುಕ್ತರ ತಂಡ ದಾಳಿ ನಡೆಸಿ ಮದುವೆ ನಿಲ್ಲಿಸಿದ ಘಟನೆ ನಗರದಲ್ಲಿ ನಡೆದಿದೆ.
ಸರ್ಕಾರದ ಮಾರ್ಗಸೂಚಿ ಗಾಳಿಗೆ ತೂರಿ ಬಿಜೆಪಿ ಮುಖಂಡ, ಕಾರ್ಪೋರೇಟರ್ ಭಾಸ್ಕರ್ ಚಂದ್ರ ಶೆಟ್ಟಿ ತಮ್ಮ ಮಗಳ ಮದುವೆಯನ್ನು ಮಂಗಳೂರಿನ ಮಂಗಳಾದೇವಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದರು. ಕೊರೊನಾ ಮಾರ್ಗಸೂಚಿಯಂತೆ ಮನೆಯ ಅಂಗಳದಲ್ಲೇ 20 ಜನರರೊಂದಿಗೆ ಮದುವೆ ಮಾಡಲು ಅವಕಾಶವಿದೆ. ಆದರೆ ಕೊರೊನಾ ನಿಯಮ ಗಾಳಿಗೆ ತೂರಿ ಜಿಲ್ಲಾಡಳಿತದ ಆದೇಶಕ್ಕೆ ಬೆಲೆ ಕೊಡದೆ, ವಿವಾಹ ನಡೆಸಿದ್ದು, ಮದುವೆ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಕಾರ್ ನಲ್ಲಿ ಬಂದ ನೂರಾರು ಜನ ಸೇರಿದ್ದರು.
ಮದುವೆಯ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಆದೇಶದಂತೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ದಾಳಿ ನಡೆಸಿ, ದೇವಸ್ಥಾನದ ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದೇ ಮುಹೂರ್ತದಲ್ಲಿ ನಾಲ್ಕು ಮದುವೆ ಎಂದು ಸಮಜಾಯಿಷಿ ನೀಡಿದ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಅರ್ಧ ಗಂಟೆಯಲ್ಲಿ 4 ಮದುವೆಯನ್ನು ಹೇಗೆ ಮಾಡುತ್ತೀರಾ, ನಗರದಲ್ಲಿ ಈ 4 ಮದುವೆ ಮಾಡಲು ಯಾರು ನಿಮಗೆ ಅನುಮತಿ ಕೊಟ್ಟವರು ಎಂದು ಆಡಳಿತ ಮಂಡಳಿ ಸೇರಿ ಮದುವೆಗೆ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿದ್ದಾರೆ. ಅನುಮತಿ ಇರುವ ಗಾಡಿಗಳನ್ನು ಬಿಟ್ಟು ಉಳಿದ ಎಲ್ಲ ವಾಹನಗಳನ್ನು ಸೀಜ್ ಮಾಡಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಆಯೋಜಕ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.