ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಯುವಕನ ಶವ ಹೆದ್ದಾರಿ ಬಳಿ ಪತ್ತೆಯಾಗಿದೆ. ಒಂದು ದಿನದ ಹಿಂದೆ ಯುವಕ ಮನೆಯಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ್ದನು.
ಪಂಜಾಬ್ ರಾಜ್ಯದ ಸಂಗರೂರ ಜಿಲ್ಲೆಯ ಝನೆಡಿ ಗ್ರಾಮದ ನಿವಾಸಿ ಭೀಮ್ ಸಿಂಗ್ (36) ಮೃತ ಯುವಕ. ಕೆಲ ದಿನಗಳಿಂದ ಫತೇಗಢನಲ್ಲಿ ವಾಸವಾಗಿದ್ದ ಯುವಕ ಗುರುವಾರ ಬೆಳಗ್ಗೆ ಆಂದೋಲನದಲ್ಲಿ ಭಾಗಿಯಾಗಲು ದೆಹಲಿ- ಹರಿಯಾಣ ಗಡಿಯತ್ತ ಹೊರಟು ಬಂದಿದ್ದನು. ಹೆದ್ದಾರಿ ಪಕ್ಕದಲ್ಲಿಯೇ ಯುವಕನ ಶವವನ್ನ ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆತನ ಗುರುತಿನ ಚೀಟಿಯಿಂದ ಆತನ ಗುರುತು ಪತ್ತೆ ಮಾಡಿ, ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಭೀಮ್ ಸಿಂಗ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.