ನವದೆಹಲಿ: ಜನಸಾಂದಣಿಯನ್ನು ನಿಯಂತ್ರಿಸಲು, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆಯೇ ಎಂದು ತಿಳಿದುಕೊಳ್ಳಲು ದೆಹಲಿಯಹಲವು ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರವನ್ನು ತಾತ್ಕಾಲಿಕವಾಗಿ ಮಂಗಳವಾರ ಮುಚ್ಚಲಾಗಿದೆ.
ದೆಹಲಿ ಮೆಟ್ರೋ ರೈಲು ಕಾರ್ಪೋರೇಷನ್ (ಡಿಎಂಆರ್ಸಿ) ಟ್ವಿಟ್ಟರ್ ಖಾತೆಯಲ್ಲಿ ‘ಜನ ಸಂದಣಿ ನಿಯಂತ್ರಿಸುವ ಸಲುವಾಗಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಎಂದು ಖಚಿತಪಡಿಸಿಕೊಳ್ಳಲು ನವದೆಹಲಿಯ ಚಾಂದನಿ ಚೌಕ್, ಕಾಶ್ಮೀರ್ ಗೇಟ್, ರಾಜೀವ್ ಚೌಕ್ ಮತ್ತು ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣಗಳ ಪ್ರವೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೇ ನಿರ್ಗಮನದ ಮೂಲಕ ಜನರಿಗೆ ಓಡಾಡಲು ಅನುಮತಿ ನೀಡಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ.
ದೆಹಲಿಯಲ್ಲಿ 6 ದಿನಗಳ ಲಾಕ್ಡೌನ್ ಘೋಷಿಸಿದ ಹಿನ್ನೆಲೆ ಡಿಎಂಆರ್ಸಿ ಸೋಮವಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಬೆಳಗ್ಗೆ 8ರಿಂದ 10ವರೆಗೆ ಹಾಗೂ ಸಂಜೆ 5ರಿಂದ ಸಂಜೆ 7ರವರೆಗೆ ಮೆಟ್ರೋ ಲಭ್ಯವಿರುತ್ತದೆ. ಅದು ಗುರುತಿನ ಚೀಟಿ ಹೊಂದಿದ ಕೆಲವೊಂದು ವರ್ಗದ ಜನರಿಗೆ ಮಾತ್ರ ಮೆಟ್ರೋನಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆಸನ ಸಾಮರ್ಥದ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಸರ್ಕಾರ ಅನುಮತಿ ನೀಡಿದೆ.