– ಎದೆ ನೋವು ಹಿನ್ನೆಲೆ ವೈದ್ಯರ ಸಲಹೆ
ನವದೆಹಲಿ: ದೀರ್ಘ ಕಾಲದ ಎದೆ ನೋವಿನಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರಿಗೆ ರಾಷ್ಟ್ರ ರಾಜಧಾನಿ ದೆಹಲಿಯ ಹವಾಮಾನ ಯೋಗ್ಯವಲ್ಲ. ವಾಯು ಮಾಲಿನ್ಯದಿಂದ ಹೆಚ್ಚು ತೊಂದರೆಯಾಗಲಿದೆ. ಹೀಗಾಗಿ ಅವರನ್ನು ಇತರೆ ನಗರಗಳಿಗೆ ಶಿಫ್ಟ್ ಮಾಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಚಳಿಗಾಲದ ಹಿನ್ನೆಲೆ ಇದು ಇನ್ನೂ ವಿಪರೀತವಾಗಲಿದೆ. ಹೀಗಾಗಿ ಅವರನ್ನು ಕೆಲ ದಿನಗಳ ಕಾಲ ಇತರೆ ನಗರಗಳಿಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಸೋನಿಯಾ ಗಾಂಧಿ ಅವರನ್ನು ಗೋವಾ ಇಲ್ಲವೆ ಚೆನ್ನೈಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪಕ್ಷದ ಮೂಲವನ್ನು ಆಧರಿಸಿ ಮಾಧ್ಯಮ ವರದಿ ಮಾಡಿದೆ.
ಶುಕ್ರವಾರ ಸಂಜೆ ಹೊತ್ತಿಗೆ ಅವರನ್ನು ಶಿಫ್ಟ್ ಮಾಡಬಹುದು. ಅವರೊಂದಿಗೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಸೇರುವ ಸಾಧ್ಯತೆಯಿದೆ. ಆಗಸ್ಟ್ ನಲ್ಲಿ ಸೋನಿಯಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಹೆಚ್ಚು ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಅವರ ದೀರ್ಘ ಕಾಲದ ಎದೆ ನೋವಿನ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿಯ ವಾಯು ಮಾಲಿನ್ಯದಿಂದಾಗಿ ಎದೆ ನೋವು ಕಡಿಮೆಯಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
ನವದೆಹಲಿ ವಾಯು ಮಾಲಿನ್ಯದಿಂದಾಗಿ ಅವರಿಗೆ ಅಸ್ತಮಾ ಹಾಗೂ ಎದೆ ನೋವು ಹೆಚ್ಚಾಗಿದೆ. ಹೀಗಾಗಿ ನಗರವನ್ನು ಬಿಟ್ಟು ಬೇರೆಡೆಗೆ ಅವರನ್ನು ಸ್ಥಳಾಂತರಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಬಿಹಾರ ಚುನಾವಣೆಯ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ನಡೆಸಬೇಕು ಎಂದು ಪಕ್ಷದ ಮುಖಂಡರು ಒತ್ತಾಯಿಸುತ್ತಿರುವ ಸಂದರ್ಭದಲ್ಲೇ ಅವರು ನಗರವನ್ನು ಬಿಟ್ಟು ಹೋಗುತ್ತಿದ್ದಾರೆ. ಇನ್ನೂ ಹಲವರು ಸಭೆ ಕರೆಯುವಂತೆ ಸೋನಿಯಾ ಗಾಂಧಿ ಅವರಿಗೆ ಪತ್ರವನ್ನು ಸಹ ಬರೆದಿದ್ದಾರೆ.
ಜುಲೈ 30ರಂದು ಸಂಜೆ ಸೋನಿಯಾ ಗಾಂಧಿ ಅವರು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಸೆಪ್ಟೆಂಬರ್ 12ರಂದು ರೂಟೀನ್ ಚೆಕಪ್ಗೆ ಕೆಲ ದಿನಗಳ ಕಾಲ ವಿದೇಶಕ್ಕೆ ತೆರಳಿದ್ದರು. ಈ ವೇಳೆ ರಾಹುಲ್ ಗಾಂಧಿ ಸಹ ಅವರೊಂದಿಗೆ ತೆರಳಿದ್ದರು. ಹೀಗಾಗಿ ಇಬ್ಬರೂ ಸಹ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ಜನವರಿಯಲ್ಲಿ ಸಹ ಸೋನಿಯಾ ಗಾಂಧಿ ಅವರು ಕೆಲ ದಿನಗಳ ಕಾಲ ಗೋವಾದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅವರು ಸೈಕಲ್ ಓಡಿಸಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.