ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಕಂಡು ಕೇಳರಿಯದ ಹಿಂಸಾಚಾರ ನಡೆಯಿತು.
ಕೆಂಪುಕೊಟೆ ಮೇಲೆ ಕೇವಲ ರಾಷ್ಟ್ರೀಯ ಧ್ವಜವನ್ನು ಹಾರಿಸಬೇಕೆಂಬ ನಿಯಮವಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗಿತ್ತು. ಆದರೆ ರೈತರ ವೇಷದಲ್ಲಿದ್ದ ಕೆಲ ಸಮಾಜಘಾತಕರು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪೊಲೀಸ್ ಭದ್ರತೆ ಬೇಧಿಸಿ ಕೆಂಪುಕೋಟೆಗೆ ಲಗ್ಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಪ್ರಧಾನಿ ಹಾರಿಸುವ ರಾಷ್ಟ್ರಧ್ವಜದ ಪಕ್ಕದಲ್ಲೇ ಇರುವ ಎಡಭಾಗದ ಖಾಲಿ ಸ್ಥಂಭದಲ್ಲಿ ರೈತ ಧ್ವಜದ ಜೊತೆಗೆ ಸಿಖ್(ನಿಶಾನ್ ಸಾಹೀಬ್) ಧ್ವಜವನ್ನು ಹಾರಿಸಲಾಗಿದೆ. ಅಲ್ಲದೇ ಭಾರತದ ತ್ರಿವರ್ಣ ಧ್ವಜವನ್ನು ನೀಡಿದ್ರೆ, ಅದನ್ನು ದೇಶದ್ರೋಹಿಯೊಬ್ಬ ಕೆಳೆಗೆಸೆದು ಅಪಮಾನ ಕೂಡ ಮಾಡಿದ್ದಾನೆ.
ಇನ್ನು ಕೆಂಪುಕೋಟೆ ಬಳಿ ಪೊಲೀಸರ ಮೇಲೆ ರೈತರ ಅಟ್ಯಾಕ್ ಮಾಡಿದ್ದಾರೆ. ಈ ದಾಳಿ ಬೆಚ್ಚಿಬೀಳಿಸುವಂತಿದೆ. ಪೊಲೀಸರ ಮೇಲೆಯೇ ದೊಣ್ಣೆ, ಕೋಲುಗಳಿಂದ ಪ್ರತಿಭಟನಾಕಾರರು ಬೀಸಿದ್ದಾರೆ. ಒಟ್ಟಿನಲ್ಲಿ ಉದ್ರಿಕ್ತರು ಪೊಲೀಸರನ್ನೇ ಅಟ್ಟಾಡಿಸಿ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಪೊಲೀಸರು ಎಲ್ಲೂ ತಪ್ಪಿಸಿಕೊಳ್ಳದಂತೆ ಪ್ರತಿಭಟನಾಕಾರರು ಲಾಕ್ ಮಾಡಿದ್ದಾರೆ. ಹೀಗಾಗಿ ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಪೊಲೀಸರು 8-10 ಅಡಿ ಎತ್ತರದ ಗೋಡೆಯಿಂದ ಜಿಗಿದಿದ್ದಾರೆ.
ನಿಹಾಂಗ್ ಸಿಖ್ ಪಡೆಯ ಸದಸ್ಯರು ರಾಜಾರೋಷವಾಗಿ ಕೆಂಪುಕೋಟೆ ಮುಂದೆ ತಲ್ವಾರ್ ಝಳಪಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಕೆಂಪುಕೋಟೆ ಮೇಲೆ ಇಂತಹ ಸನ್ನಿವೇಶ ಕಂಡು ಬಂದಿರಲಿಲ್ಲ. ಇನ್ನು ಪ್ರತಿಭಟನಾಕಾರರ ಪೈಕಿ ಒಬ್ಬನ ಕೈಯಲ್ಲಿ ಖಲೀಸ್ತಾನ್ ಅಂತ ಬರೆದಿರೋ ಕಡಗ ಕೂಡ ಕಂಡು ಬಂದಿದೆ. ಹೀಗಾಗಿ ರೈತರ ಹೋರಾಟದ ಹಿಂದೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಪಾತ್ರವಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದನ್ನು ಗಮನಿಸಿದ್ರೆ ರೈತ ಹೋರಾಟದ ಮೇಲೆ ಕಿಸಾನ್ ಯೂನಿಯನ್ ಹಿಡಿತ ಕಳೆದುಕೊಂಡಿದ್ಯಾ ಎಂಬ ಪ್ರಶ್ನೆ ಕೂಡ ಎದ್ದಿದೆ. ಇನ್ನು ಕೇಂದ್ರ ಸರ್ಕಾರ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿದೆ. ಅಮಿತ್ ಷಾ ನೇತೃತ್ವದಲ್ಲಿ ತುರ್ತು ಸಭೆ ಕೂಡ ನಡೆಸಲಾಗಿದೆ.