ನವದೆಹಲಿ: ದೇಶದ ರಾಜಧಾನಿ ಜನತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಶುಭ ಸುದ್ದಿ ನೀಡಿದ್ದು, ಅನ್ಲಾಕ್ ಪ್ರಕ್ರಿಯೆ ಆರಂಭಿಸಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆ ಕೆಲವೊಂದು ವಲಯಗಳ ಪುನಾರಾರಂಭಕ್ಕೆ ಷರತ್ತುಬದ್ಧ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ದೊಡ್ಡ ಪರಿಶ್ರಮದಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಆದ್ರೆ ಹೋರಾಟದ ಪೂರ್ಣ ಗೆಲುವು ಸಿಕ್ಕಿಲ್ಲ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯ ಲಾಕ್ಡೌನ್ ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತದೆ. ಮೊದಲಿಗೆ ಬಡವರು, ದಿನಗೂಲಿ ನೌಕರರು ಮತ್ತು ಪ್ರವಾಸಿ ಕಾರ್ಮಿಕರಿಗೆ ಆದ್ಯತೆ. ಹಾಗಾಗಿ ಸೋಮವಾರದಿಂದ ಕಟ್ಟಡ ಕಾಮಗಾರಿ ಮತ್ತು ಫ್ಯಾಕ್ಟರಿಗಳನ್ನು ತೆರೆಯಬಹುದಾಗಿದೆ. ಮುಂದಿನ ವಾರ ಮತ್ತೆ ಎರಡು ವಲಯಗಳು ಅನ್ಲಾಕ್ ಆಗಲಿವೆ ಎಂದು ಸಿಎಂ ತಿಳಿಸಿದ್ದಾರೆ.
ಈ ವಾರದ ಅನ್ಲಾಕ್ ಬಳಿಕ ಜನರು ಮತ್ತು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಕೊರೊನಾ ಪಸರಿಸುವ ಪ್ರಮಾಣ ಏರಿಕೆಯಾದ್ರೆ ಅನ್ಲಾಕ್ ಪ್ರಕ್ರಿಯೆಯನ್ನ ರದ್ದುಗೊಳಿಸಲಾಗುವುದು. ಹಾಗಾಗಿ ದೆಹಲಿ ಜನತೆ ಅನ್ಲಾಕ್ ನಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದ ಜೊತೆ ಕೈ ಜೋಡಿಸಬೇಕೆಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.