ಚಿತ್ರದುರ್ಗ: ದೆವ್ವ ಬಿಡಿಸುವ ನೆಪದಲ್ಲಿ 2 ವರ್ಷದ ಹೆಣ್ಣು ಮಗುವನ್ನು ಮಾಂತ್ರಿಕನೊಬ್ಬ ಬರ್ಬರ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಜ್ಕಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿ ಮಗುವನ್ನು ಪೂರ್ಣಿಕಾ ಎಂದು ಗುರುತಿಸಲಾಗಿದ್ದು, ಈಕೆ ಪ್ರವೀಣ್ ಹಾಗೂ ಬೇಬಿ ದಂಪತಿಯ ಪುತ್ರಿ. ಸದ್ಯ ಪೋಷಕರ ಮೌಢ್ಯತೆಗೆ ಪುಟ್ಟ ಕಂದಮ್ಮ ಬಲಿಯಾಗಿದೆ.
ಪೂರ್ಣಿಕಾ ಪದೇ ಪದೇ ಬೆಚ್ಚಿ ಬೀಳುತ್ತಿದ್ದಳು. ಅಜ್ಜಿಕ್ಯಾತನಹಳ್ಳಿಯ ರಾಕೇಶ್ ಯಲ್ಲಮ್ಮನ ಆರಾಧಕನಾಗಿದ್ದು, ಮಂತ್ರವಾದಿಯಾಗಿ ಗುರುತಿಸಿಕೊಂಡಿದ್ದ. ಹೀಗಾಗಿ ಪೋಷಕರನ್ನು ಈಕೆಯನ್ನು ಮಾಂತ್ರಿಕ ರಾಕೇಶ್ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ರಾಕೇಶ್, ಮಗು ಪದೇ ಪದೇ ಬೆಚ್ಚಿ ಬೀಳೋದಕ್ಕೆ ದೆವ್ವ ಹಿಡಿದಿದೆ, ಅದನ್ನು ಬಿಡಿಸಬೇಕು ಎಂದು ಹೇಳಿದ್ದ.
ದೆವ್ವ ಬಿಡಿಸಬೇಕು ಎಂದಾಗ ಮಗುವಿನ ಪೋಷಕರು ಒಪ್ಪಿಕೊಂಡರು. ಅಂತೆಯೇ ರಾಕೇಶ್ ದೆವ್ವ ಬಿಡಿಸುವ ನೆಪದಲ್ಲಿ ಎಕ್ಕೆಗಿಡ ಬೆತ್ತದಿಂದ ಬಾರಿಸಿದ್ದಾನೆ. ರಾಕೇಶ್ ಹೊಡೆತಕ್ಕೆ ಪೂರ್ಣಿಕಾ ದೇಹದ ತುಂಬ ಬೆತ್ತದ ಗಾಯ, ಬಾಸುಂಡೆ ಎದ್ದಿದೆ. ಅಲ್ಲದೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಇತ್ತ ಮಗು ಕುಸಿದು ಬಿದ್ದಿದ್ದರಿಂದ ರಾಕೇಶ್, ಪೂರ್ಣಿಕಾ ಪೋಷಕರನ್ನು ಕರೆದು ಮಗುವಿಗೆ ಪ್ರಜ್ಞೆ ತಪ್ಪಿದೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಮಗುವಿನ ಸ್ಥಿತಿ ಕಂಡು ಕಂಗಾಲಾದ ಪೋಷಕರು ಕೂಡಲೇ ಆಕೆಯನ್ನು ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಅದಾಗಲೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೂರ್ಣಿಕಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಪರಾರಿಯಾಗಿದ್ದ ರಾಕೇಶ್ ನನ್ನು ಮಗುವಿನ ಪೋಷಕರ ದೂರು ಆಧರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.