ಬೆಂಗಳೂರು: ಹೆಚ್ಚು ಸಂಖ್ಯೆಯಲ್ಲಿ ಉಸಿರಾಟದ ಸಮಸ್ಯೆಯಿಂದಾಗಿ ಕೋವಿಡ್ ಸೋಂಕಿತರು ಆಸ್ಪತ್ರೆ ಸೇರುತ್ತಿರುವ ಕಾರಣ ರಾಜ್ಯದಲ್ಲಿ ಈಗ ಆಕ್ಸಿಜನ್ ಸಮಸ್ಯೆ ಸೃಷ್ಟಿಯಾಗಿದೆ.
ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಜೊತೆ ಕೋವಿಡ್ ಇಲ್ಲದ ರೋಗಿಗಳು ಸಹ ಅಡ್ಮಿಟ್ ಆಗಿದ್ದಾರೆ. ಕಳೆದ ವರ್ಷದ ಅಲೆಯಲ್ಲಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಹಲವು ಸೋಂಕಿತರಿಗೆ ಅಷ್ಟೊಂದು ಆಕ್ಸಿಜನ್ ಅಗತ್ಯ ಇರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು ಸೋಂಕಿತರ ಆಕ್ಸಿಜನ್ ಮಟ್ಟ ಕೆಲವೇ ಗಂಟೆಗಳಲ್ಲಿ ಇಳಿಕೆಯಾಗುತ್ತಿದೆ. ವೈದ್ಯರಿಗೆ ಸಹ ರೋಗಿಯ ಆಕ್ಸಿಜನ ಮಟ್ಟ ಇಳಿಕೆಯಾಗುತ್ತಿರುವುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೋಗಿಗಳಿಗೆ ಆಕ್ಸಿಜನ್ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಜೊತೆ ಸೋಂಕು ಉಲ್ಭಣಗೊಂಡು ಕೊನೆ ಕ್ಷಣದಲ್ಲಿ ಆಸ್ಪತ್ರೆ ಸೇರುತ್ತಿರುವ ಕಾರಣ ಆಕ್ಸಿಜನ್ ಸಮಸ್ಯೆಯ ಜೊತೆ ಸಾವು ನೋವುಗಳ ಸಂಖ್ಯೆ ಹೆಚ್ಚಾಗಿದೆ.
ದಿಢೀರ್ ಬೇಡಿಕೆ ಯಾಕೆ?
ಈ ಮೊದಲು ರಾಜ್ಯದಲ್ಲಿ ನಿತ್ಯ 300 ಮೆಟ್ರಿಕ್ ಟನ್ ಆಕ್ಸಿಜನ್ ಬಳಕೆ ಆಗುತ್ತಿತ್ತು. ಸೋಂಕು ಹೆಚ್ಚಾದಂತೆ ನಿತ್ಯ 1750 ಮೆ.ಟನ್ ಆಕ್ಸಿಜನ್ಗೆ ಬೇಡಿಕೆ ಬಂದಿದೆ. ಕೇಂದ್ರದ ಬಳಿ ನಿತ್ಯ 1471 ಮೆ.ಟನ್ ಆಕ್ಸಿಜನ್ ನೀಡುವಂತೆ ಸರ್ಕಾರ ಬೇಡಿಕೆ ಇಟ್ಟಿತ್ತು. ಆದರೆ ಕೇಂದ್ರದಿಂದ ಕೇವಲ 800 ಮೆ.ಟನ್ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಆಕ್ಸಿಜನ್ಗಾಗಿ ಬೇಡಿಕೊಳ್ಳುವ ದುಸ್ಥಿತಿ ಎದುರಾಗಿದ್ದು, ಸರ್ಕಾರ ಆಕ್ಸಿಜನ್ ಉತ್ಪಾದನೆ ದಾಸ್ತಾನು ಮಾಡಿಕೊಂಡಿಲ್ಲ. ಕೇರಳ ಮಾದರಿಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಲ್ಲ.
ಆಸ್ಪತ್ರೆಗಳು ಸ್ಥಾಪನೆಯಾಗುವಾಗುವಾಗಲೇ ಆಕ್ಸಿಜನ್ ಉತ್ಪದನಾ ಘಟಕಗಳನ್ನು ಸ್ಥಾಪನೆ ಮಾಡಿದ್ದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಉತ್ಪದನಾ ಘಟಕ ಸ್ಥಾಪನೆ ಮಾಡಬೇಕಾದರೆ ಜಾಗ ಬೇಕಾಗುತ್ತದೆ. ಜಾಗದ ಸಮಸ್ಯೆ ಇರುವ ಕಾರಣ ಹಲವು ಖಾಸಗಿ ಆಸ್ಪತ್ರೆಗಳು ಹೊರಗಡೆಯಿಂದ ಆಕ್ಸಿಜನ್ ಸಿಲಿಂಡರ್ ತರುತ್ತವೆ.