ಇಸ್ಲಾಮಾಬಾದ್: ಭೂಗತ ಲೋಕದ ಪಾತಾಕಿ ದಾವೂದ್ ಇಬ್ರಾಹಿಂ ನಮ್ಮಲ್ಲೇ ಇದ್ದಾನೆ ಎಂದು ಪಾಕಿಸ್ತಾನ ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದೆ.
ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ತಲೆಮರೆಸಿಕೊಂಡು ಪಾಕಿಸ್ತಾನದಲ್ಲಿ ಅವಿತು ಕೂತಿದ್ದಾನೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಮಾತನ್ನು ಪಾಕಿಸ್ತಾನ ತಳ್ಳಿ ಹಾಕಿಕೊಂಡು ಬಂದಿತ್ತು. ಆದರೆ ಇದೀಗ ಸ್ವತಃ ಪಾಕಿಸ್ತಾನವೇ ದಾವೂದ್ ನಮ್ಮ ಕರಾಚಿಯಲ್ಲೇ ಇದ್ದಾನೆ ಎಂದು ಒಪ್ಪಿಕೊಂಡಿದೆ.
ಆರ್ಥಿಕ ನಿರ್ಬಂಧದಿಂದ ಹೊರ ಬರಲು ಪಾಕಿಸ್ತಾನ ತಮ್ಮ ದೇಶದಲ್ಲಿ ಸಕ್ರಿಯವಾಗಿರುವ 88 ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡುವುದಾಗಿ ಹೇಳಿಕೊಂಡಿತ್ತು. ಇದರ ಭಾಗವಾಗಿ ದಾವೂದ್ ನಮ್ಮಲ್ಲಿಯೇ ಇದ್ದಾನೆ ಎಂದು ಒಪ್ಪಿಕೊಂಡಿದ್ದು, ಪಾಕಿಸ್ತಾನ ಸೇರಿದಂತೆ 14 ರಾಷ್ಟ್ರಗಳ ಪಾಸ್ಪೋರ್ಟ್ಗಳು ದಾವೂದ್ ಬಳಿ ಇವೆ ಎಂದು ಮಾಹಿತಿ ನೀಡಿದೆ. ಅಲ್ಲದೆ ದಾವೂದ್ ಆಸ್ತಿ, ಬ್ಯಾಂಕ್ ಅಕೌಂಟ್ ಸೀಜ್ ಮಾಡಿ ಆರ್ಥಿಕ ದಿಗ್ಬಂಧನ ಹೇರುತ್ತೇವೆ ಎಂದೂ ಕೂಡ ಹೇಳಿದೆ.
ಪ್ಯಾರಿಸ್ ಮೂಲದ ಎಫ್ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಉಗ್ರರನ್ನು ಮಟ್ಟಹಾಕದೇ ಇದ್ದರೆ, ನಿಮ್ಮನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಈ ಹಿಂದೆ ಎಚ್ಚರಿಕೆ ನೀಡಿತ್ತು. ಇದರಿಂದ ಹೆದರಿದ ಪಾಕಿಸ್ತಾನ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜೆಯುಡಿಯ ಹಫೀಜ್ ಸಯೀದ್, ಜೆಇಎಂನ ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಸೇರಿದಂತೆ 88 ಉಗ್ರ ಸಂಘಟನೆಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಲು ನೋಟಿಸ್ ನೀಡಿದೆ.
ಉಗ್ರ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಪ್ಯಾರೀಸ್ ಮೂಲದ ಎಫ್ಎಟಿಎಫ್ 2019ರಲ್ಲಿ ಪಾಕಿಸ್ತಾನಕ್ಕೆ ಡೆಡ್ಲೈನ್ ವಿಧಿಸಿತ್ತು. ಆದರೆ ಈ ಡೆಡ್ಲೈನ್ ಅನ್ನು ಕೊರೊನಾ ಕಾರಣದಿಂದಾಗಿ ಮುಂದಕ್ಕೆ ಹಾಕಲಾಗಿತ್ತು. ಈಗ ಈ ಗಡುವು ಮುಗಿದಿದ್ದು, ಕಪ್ಪುಪಟ್ಟಿಗೆ ಸೇರುವ ಭಯದಲ್ಲಿ ಪಾಕಿಸ್ತಾನ ತನ್ನ ಉದರದಲ್ಲಿ ಬಚ್ಚಿಟ್ಟಿಕೊಂಡಿದ್ದ ಉಗ್ರಕ್ರಿಮಿಗಳಿಗೆ ನೋಟಿಸ್ ನೀಡಿದೆ.