– ಪೊಲೀಸರಿಂದ ವ್ಯಕ್ತಿಯ ಬಂಧನ
– ಸಿಸಿಟಿವಿಯಲ್ಲಿ ದೃಶ್ಯ ಸೆರೆ
ನವದೆಹಲಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕರುವೊಂದು ದಾಳಿಮಾಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ದಾರಿಹೋಕ ಇಟ್ಟಿಗೆಯಿಂದ ಕರುವಿಗೆ ಹೊಡೆದಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದಂತೆ, ಪ್ರಾಣಿ ಹಿಂಸೆಯ ಆರೋಪದಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪೂರ್ವ ದೆಹಲಿಯ ವಿನೋದ್ ನಗರ ಪ್ರದೇಶದ ರಸ್ತೆಯಲ್ಲಿ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾಗ ಹಸುವಿನೊಂದಿಗಿದ್ದ ಕರು ಏಕಾಏಕಿ ವ್ಯಕ್ತಿಯ ಮೇಲೆ ತಿವಿಯಲು ಬಂದಿದೆ. ಇದರಿಂದ ಕೆರಳಿದ ದಾರಿಹೋಕ ಕರುವಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದಾನೆ. ಪುನಃ ಸಮಾಧಾನಗೊಳ್ಳದೆ ಹತ್ತಿರದಲ್ಲಿದ್ದ ಇಟ್ಟಿಗೆಯನ್ನು ತೆಗೆದುಕೊಂಡು ಹಲವು ಬಾರಿ ಹೊಡೆದಿದ್ದಾನೆ. ಇದರಿಂದ ಕರುವಿಗೆ ಗಾಯಗಳಾಗಿವೆ. ಈ ದೃಶ್ಯ ಪಕ್ಕದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕರುವಿಗೆ ದಾಳಿ ಮಾಡಿ ಗಾಯವಾಗುತ್ತಿದ್ದಂತೆ ಮಾಹಿತಿ ತಿಳಿದು ಸ್ಥಳಕ್ಕೆ ಸ್ಥಳೀಯಾಡಳಿತದ ಅಧಿಕಾರಿಗಳು ಆಗಮಿಸಿ ಕರುವನ್ನು ರಕ್ಷಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಘಟನೆಯ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದ ಪೊಲೀಸರು ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ. ಈ ಕರಿತು ಟ್ವೀಟ್ ಮಾಡಿರುವ ಪೂರ್ವ ದೆಹಲಿಯ ಡಿಸಿಪಿ ಆರೋಪಿಯನ್ನು ಕಮಲ್ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಾಣಿಗಳ ಮೇಲಿನ ಕೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದರು.