ಬಳ್ಳಾರಿ: ದಾರಿ ತಪ್ಪಿ, ಆಹಾರ ಹುಡುಕಿಕೊಂಡು ಕರಡಿಯೊಂದು ನಗರಕ್ಕೆ ಎಂಟ್ರಿ ಕೊಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿ ಸೆರೆ ಹಿಡಿದಿದ್ದಾರೆ.
ನಗರದ ತಾಳೂರ ರಸ್ತೆಯ ರೇಣುಕಾ ನಗರದ 16ನೇ ಕ್ರಾಸ್ ನಲ್ಲಿ ಇಂದು ಮುಂಜಾನೆ ಕರಡಿ ಪ್ರತ್ಯಕ್ಷವಾಗಿತ್ತು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿ ಸೆರೆ ಹಿಡಿದಿದ್ದಾರೆ. ಸತತ 5 ಗಂಟೆಗಳ ಕಾರ್ಯಾಚರಣೆ ನಡೆಸಿ ಕೊನೆಗೂ ಕರಡಿಯನ್ನು ಸೆರೆ ಹಿಡಿದಿದ್ದಾರೆ. ಇಂದು ಬೆಳಗ್ಗೆಯಿಂದ ಹರಸಾಹಸ ಪಟ್ಟು ಮಧ್ಯಾಹ್ನದ ವೇಳೆಗೆ ಕರಡಿಯನ್ನು ಸೆರೆ ಹಿಡಿದಿದ್ದಾರೆ.
ಪ್ರತ್ಯಕ್ಷ ದರ್ಶಿಗಳು ಹೇಳುವಂತೆ ನಿನ್ನೆ ರಾತ್ರಿ ನಗರದ ವಿಮ್ಸ್ ನ ಹೊಸ ಡೆಂಟಲ್ ಕಾಲೇಜು ಬಳಿ ಬಂದ ಕರಡಿ, ಅಲ್ಲಿನ ಹೋಮ್ ಗಾರ್ಡ್ ಒಬ್ಬರನ್ನು ಅಟ್ಟಿಸಿಕೊಂಡು ಹೋಗಿದೆ.ನಂತರ ಅಲೆಯುತ್ತ ತಾಳೂರು ರಸ್ತೆಯ ರೇಣುಕಾ ನಗರದ 16 ನೇ ಕ್ರಾಸ್ ನಲ್ಲಿರುವ ಬೇಲಿಯಲ್ಲಿ ಅಡಗಿಕೊಂಡಿತ್ತು. ಬೆಳ್ಳಂ ಬೆಳಗ್ಗೆ ಕರಡಿ ಬರುತ್ತಿರುವುದನ್ನು ನೋಡಿ ನಾಯಿಗಳು ಬೊಗಳಿವೆ, ಬಳಿಕ ಸ್ಥಳೀಯರು ಗಮನಿಸಿ ದಂಗಾಗಿದ್ದಾರೆ.
ಬಳಿಕ ಕರಡಿ ನೋಡಲು ಹೆಚ್ಚು ಜನ ಸೇರಿದ್ದು, ಹೆಚ್ಚು ಜನ ಸೇರಿದ್ದರಿಂದ ಕರಡಿ ಭಯಗೊಂಡು ಬೇಲಿಯ ಪೊದೆಯಲ್ಲಿ ಅಡಗಿಕೊಂಡಿತ್ತು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿದ್ದು, ಕಾರ್ಯಚರಣೆ ನಡೆಸಿ ಕರಡಿಯನ್ನು ಸೆರೆ ಹಿಡಿದಿದ್ದಾರೆ.