ಚಿಕ್ಕಮಗಳೂರು: ಕೊರೊನಾ ರೋಗಿಗಳಿಗಾಗಿ ಸಮಾಜ ಸೇವಕರು ದಾನ ನೀಡಿದ್ದ ಅಂಬುಲೆನ್ಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ತರೀಕೆರೆ ಸಮಾಜ ಸೇವಕರಾದ ಗೋಪಿಕೃಷ್ಣ ಕೊರೊನಾ ರೋಗಿಗಳಿಗೆ ಅನುಕೂಲವಾಗಲೆಂದು ಅಕ್ಸಿಜನ್ ಸಹಿತ ವೆಂಟಿಲೇಟರ್ ಸೌಲಭ್ಯದ ಮೂರು ಅಂಬುಲೆನ್ಸ್ ಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕೊಡುಗೆ ನೀಡಿದ್ದರು. ಮೂರು ಅಂಬುಲೆನ್ಸ್ ಗೆ ಅವರೇ 13 ಸಿಬ್ಬಂದಿಯನ್ನು ನೇಮಕ ಸಹ ಮಾಡಿ ಆಸ್ಪತ್ರೆಗೆ ದಾನ ನೀಡಿದ್ದರು. ಈ ಅಂಬುಲೆನ್ಸ್ ಗಳು ಉಚಿತವಾಗಿ ತರೀಕೆರೆ ತಾಲೂಕಿನಾದ್ಯಂತ ಓಡಾಡಿ ನೂರಾರು ಜನರ ಕಷ್ಟಕ್ಕೆ ನೆರವಾಗುತ್ತಿದ್ದವು. ರೋಗಿಗಳಿಂದ ಒಂದು ರೂಪಾಯಿ ಹಣ ಪಡೆಯದೆ ಇಡೀ ತಾಲೂಕಿನಾದ್ಯಂತ ಸಂಚರಿಸಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದವು. ಆದರೆ ದುಷ್ಕರ್ಮಿಗಳು ಒಂದು ಅಂಬುಲೆನ್ಸ್ ನ ಗಾಜು ಒಡೆದಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಮಾಸಿಕ 3,500 ರೂ. ಪರಿಹಾರ – ಸಿಎಂ ಮಹತ್ವದ ಘೋಷಣೆ
ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಮಣಿಪಾಲ್ಗೂ ಈ ಅಂಬುಲೆನ್ಸ್ ಗಳು ಉಚಿತವಾಗಿ ಕರೆದುಕೊಂದು ಹೋಗುತ್ತಿದ್ದವು. ಆದರೆ ಕಳೆದ ರಾತ್ರಿ ರೋಗಿಯನ್ನು ಶಿವಮೊಗ್ಗಕ್ಕೆ ಬಿಟ್ಟು ಬಂದು ತರೀಕೆರೆ ಪಟ್ಟಣದ ಬಯಲುರಂಗ ಮಂದಿರದ ಬಳಿ ವಾಹನ ನಿಲ್ಲಿಸಿದಾಗ ದುಷ್ಕರ್ಮಿಗಳು ಒಂದು ಆಂಬುಲೆನ್ಸ್ ನ ಗಾಜುಗಳನ್ನ ಪುಡಿ-ಪುಡಿ ಮಾಡಿದ್ದಾರೆ. ಈ ಕುರಿತು ದುಷ್ಕರ್ಮಿಗಳ ವಿರುದ್ಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊರೊನಾ ಕಾಲದಲ್ಲಿ ಅಂಬುಲೆನ್ಸ್ ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಆಕ್ಸಿಜನ್ ಸಹಿತ ವೆಂಟಿಲೇಟರ್ ಇರುವ ಅಂಬುಲೆನ್ಸ್ ಇವಾಗಿವೆ.