ಬೆಂಗಳೂರು: ಉಪಕದನ ಕಣ ರಂಗೇರುತ್ತಿದ್ದು, ಇಂದು ಆರ್ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಖಾಡಕ್ಕಿಳಿದಿದ್ದಾರೆ.
ರೋಡ್ ಶೋ ಆರಂಭ ಮಾಡಿದಾಗ ಅಭಿಮಾನಿಗಳು ದರ್ಶನ್ ಗೆ ಹೂವಿನ ಸ್ವಾಗತ ಕೋರಿದರು. ಅಲ್ಲದೆ ಬಿಜೆಪಿ ಹಾಗೂ ದರ್ಶನ್ ಪರ ಘೋಷಣೆಗಳನ್ನು ಕೂಗಿದರು. ದರ್ಶನ್ ಹಾಗೂ ಮುನಿರತ್ನಗೆ ರಾಕ್ಲೈನ್ ವೆಂಕಟೇಶ್, ತೇಜಸ್ವಿನಿ ಗೌಡ ಸಾಥ್ ನೀಡಿದರು.
ಇತ್ತ ನಟಿ ಅಮೂಲ್ಯ ಅವರು ತಮ್ಮ ಪತಿ ಜಗದೀಶ್ ಜೊತೆ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಅಮೂಲ್ಯ ಮೇಲೂ ಹೋವಿನ ಸುರಿಮಳೆಗೈದು ಅಭಿಮಾನಿಗಳು ಪ್ರಚಾರಕ್ಕೆ ಬರಮಾಡಿಕೊಂಡರು.
ಯಶವಂತಪುರ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ದರ್ಶನ್ ರೋಡ್ ಶೋ ಮಾಡುತ್ತಿದ್ದಾರೆ. ಸಾರಥಿಯ ನೋಡಲು ಜನ ಮನೆ, ಕಟ್ಟಡಗಳ ಮೇಲೆ ನಿಂತಿದ್ದಾರೆ. ಅಲ್ಲದೆ ದರ್ಶನ್ ಗೆ ಜೈಕಾರ, ಹೂ ಎರಚಿ ಅಭಿಮಾನ ಮೆರೆಯುತ್ತಿದ್ದಾರೆ.
ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಮುನಿರತ್ನ ಅವರು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕ್ಷೇತ್ರದ ಜನತೆಗೆ ದಿನಸಿ ವಿತರಿಸುವ ಮೂಲಕ ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ನಾನು ಅವರ ಪರ ಪ್ರಚಾರಕ್ಕೆ ತೆರಳುತ್ತಿದೇನೆ. ಮುನಿರತ್ನ ಬೆಂಬಲಿಸಲು ಅವರು ಮಾಡಿರುವ ಸಹಾಯವೇ ಸಾಕು. ಅವರು ಕರೆದಲ್ಲಿಗೆ ಹೋಗಿ ಪ್ರಚಾರ ಮಾಡ್ತೀನಿ. ಅವರು ನನ್ನ ಅತ್ಯಂತ ಆಪ್ತರು. ಸಂಕಷ್ಟಕ್ಕೆ ನಿಂತವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.