ಬೆಂಗಳೂರು: ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ಮೂಲಕ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಮಾಡಿದ್ದ ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಗೋಪುರಾಮ್ ಗೋಪಾಲ್, ಜಿತೇಂದ್ರ ಮಾಲಿ ಮತ್ತು ವೀರ್ರಾಮ್ ಮಾಂಗಿಲಾಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 90 ಲಕ್ಷ ಮೌಲ್ಯದ 1.757 ಕೆಜಿ ಚಿನ್ನ ಮತ್ತು 3.5 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಚಿನ್ನ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದು ದರೋಡೆ ಮಾಡಿದ್ದರು. ನಕಲಿ ಗನ್ ತೋರಿಸಿ 3.455 ಕೆಜಿ ಚಿನ್ನ, 715 ಗ್ರಾಂ ಬೆಳ್ಳಿ ಮತ್ತು 3.96 ನಗದು ದೋಚಿ ಎಸ್ಕೇಪ್ ಆಗಿದ್ದರು. ಸಿಸಿಟಿವಿ ವಿಡಿಯೋ ಆಧರಿಸಿ ಜಾಲಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಆನ್ಲೈನ್ ಫುಡ್ ಡಿಲವೆರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಗೋಪುರಾಮ್ ಈ ಹಿಂದೆ 2016ರಲ್ಲಿ ಜ್ಯುವೆಲ್ಲರಿ ಶಾಪ್ ರಾಬರಿಯಲ್ಲಿ ಬಂಧಿತನಾಗಿದ್ದನು ಎಂದು ತಿಳಿದುಬಂದಿದೆ.